ಮೈಕ್ರೋ ಫೈನಾನ್ಸ್ :ವಸ್ತು ಸ್ಥಿತಿ ಭಿನ್ನ

ಮೈಕ್ರೋ ಫೈನಾನ್ಸ್ :ವಸ್ತು ಸ್ಥಿತಿ ಭಿನ್ನ


ಚುನಾಯಿತ ಸರ್ಕಾರದ ಆದ್ಯತೆ ಶೋಷಕ ಮಾರುಕಟ್ಟೆಯನ್ನು ರಕ್ಷಿಸುವುದಲ್ಲ ಕರ್ನಾಟಕದ ದುರ್ಬಲ ವರ್ಗಗಳಲ್ಲಿ ಬದುಕು ಸವೆಸಲು ಹೆಣಗಾಡುತ್ತಿರುವ ದೊಡ್ಡ ಜನಸಂಖ್ಯೆನೇ ಇದೆ. ಈ ವರ್ಗಗಳನ್ನೇ ಶೋಷಣೆಯ ಗುರಿ ಮಾಡಿಕೊಂಡು, ತಮ್ಮ ಬಂಡವಾಳದ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳಲು ಸುಭದ್ರ ಅಡಿಪಾಯ ಒದಗಿಸುವ ಮೈಕ್ರೋ ಫೈನಾನ್ಸ್ ಎಂಬ ಪರಿಕಲ್ಪನೆಯೇ ನವ ಉದಾರವಾದಿ ಆರ್ಥಿಕತೆಯ ಸೃಷ್ಠಿ. ದುರ್ಬಲ ವರ್ಗಗಳ ಜನರಿಗೆ ಅವರ ತಿಂಗಳ ವರಮಾನಕ್ಕಿಂತ ತುಸು ಹೆಚ್ಚಿನ ಹಣದ ಅಗತ್ಯ ಎದುರಾದಾಗ ಅದನ್ನು ಸುಲಭದಲ್ಲಿ ಒದಗಿಸಿಕೊಡುವ ಜನಪರವಾದ ಆರ್ಥಿಕ ವ್ಯವಸ್ಥೆ ಇಲ್ಲದ ಭಾರತಾದಂತಹ ದೇಶಗಳಲ್ಲಿ ಇಂತಹವರು ಸಮಾಜದ ‘ಉಳ್ಳವರ’ ಮುಂದೆ ಕೈಚಾಚುತ್ತಾರೆ. ಇದು ಸಹಜ. ಈ ಬಗೆಯ ಕೈ ಚಾಚು ವಿಕೆಯನ್ನು ಚಾರಿತ್ರಿಕವಾಗಿ ಉಳಿಗಮಾನ್ಯ ವ್ಯವಸ್ಥೆಯ ಜೀತ ಪದ್ಧತಿ -ಲೇವಾದೇವಿ ಮತ್ತು ಅದು ಸೃಷ್ಟಿಸುವ ಪರಾವಲಂಬನೆಯಲ್ಲಿ ಗುರುತಿಸಬಹುದು.


ಭಾರತ ಈಗ ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿದ್ದರು ಈ ಪ್ರಾಚೀನ ವ್ಯವಸ್ಥೆಯು ಲೇವಾದೇವಿ ವಹಿವಾಟು, ಖಾಸಗಿ ಚೀಟಿ ವ್ಯವಹಾರ, ಚಕ್ರ ಬಡ್ಡಿ,ಮೀಟರ್ ಬಡ್ಡಿ ಎಂದೆಲ್ಲಾ ರೂಪಾಂತರಗೊಂಡಿದೆ. ಮೇಲ್ಪದರದಿಂದ ತಲಮಟ್ಟದವರೆಗೂ ಇದು ಚಾಲ್ತಿಯಲ್ಲಿದೆ. ಸಿರಿವಂತರ ಸಂಖ್ಯೆ ಹೆಚ್ಚಾಗಿದೆ ಎಂಬುದೊಂದೆ ಇದಕ್ಕೆ ಕಾರಣವಲ್ಲ. ಸಾಮಾಜಿಕ ಪಿರಮಿಡ್ದಿನ ತಳಪಾಯದಲ್ಲಿರುವ ಅಪಾರ ಜನಸ್ತೋಮದ ಬಳಿ ಜೀವನೋಪಾಯಕ್ಕೆ ಸಾಕಾಗುವಷ್ಟು ಹಣ ಅಥವಾ ಆದಾಯ ಇಲ್ಲ ಎನ್ನುವುದು ಕಾರಣ. ಆದರು ನಾವು ‘ಸಮಾಜವಾದ- ಗ್ಯಾರೆಂಟಿ- ಕಲ್ಯಾಣ ಯೋಜನೆ’ ಅಂತಹವುಗಳ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ .ಕೆಲವರ ದೃಷ್ಟಿ ಯಲ್ಲಿ ಅನ್ನ, ಬಟ್ಟೆ ಮತ್ತು ಮನೆ ಇಷ್ಟಿದ್ದರೆ ಮನುಷ್ಯನ ಬದುಕಿಗೆ ಸಾಕು.
ಆದರೆ ವಸ್ತುವಾದಲ್ಲಿ ಮನುಷ್ಯ ಜೀವಿಗೆ ಇದರಿಂದ ಆಚೆಗಿನ ಬಾಧ್ಯತೆಗಳು, ಕೌಟುಂಬಿಕ ಖರ್ಚುಗಳು ಬಹಳಷ್ಟು ಇರುತ್ತವೆ. ಇದು ಮಧ್ಯಮ ವರ್ಗಗಳಲ್ಲೂ ಕಾಣಬಹುದಾದ ವಿದ್ಯಮಾನ. ದುರ್ಬಲ ವರ್ಗಗಳಲ್ಲಿನ ದುಡಿಯುವ ಜನರಿಗೆ ಅನಿಶ್ಚಿತಾ ಭಾದ್ಯತೆಗಳು ಕನಿಷ್ಠ ಮಟ್ಟದಲ್ಲಿದ್ದರೂ ಅವರ ದುಡಿಮೆಯ ಆದಾಯದಲ್ಲಿ ಅವುಗಳನ್ನು ಸರಿದೂಗಿಸುವುದು ಕಷ್ಟ. ಇದು ಮೇಲ್ಪದರದ ಸಮಾಜದಲ್ಲೂ ಇರುತ್ತದೆಯಾದರೂ ಈ ಭಾಗ್ಯತೆಗಳನ್ನು ನೀಗಿಸಲು ಅಗತ್ಯವಾದ ಸಾಲ ಸೌಲಭ್ಯಗಳು ಸಾಂಸ್ಥಿಕವಾಗಿ ಅವರಿಗೆ ಲಭ್ಯವಾಗುತ್ತದೆ. ಈ ಸಾಂಸ್ಥಿಕ ಸೌಲಭ್ಯಗಳು ಕೆಲ ಮಧ್ಯಮ ವರ್ಗಗಳಿಗೆ, ತಳ ಸಮಾಜದ ಜನರಿಗೆ ಸುಲಭವಾಗಿ ತಲುಪುವುದಿಲ್ಲ. ಹೀಗೆ ತಲುಪುವಂತೆ ಮಾಡುವ ಜವಾಬ್ದಾರಿಯನ್ನು ಸಂಬಂಧ ಪಟ್ಟವರು ಹೊರುವುದು ಇಲ್ಲ.

ಇದನ್ನೂ ಓದಿ:ಭಾಷೆ ಬೆಳೆಯಲು ಬೇಕಿರುವುದು ಭಾವುಕ ಆವೇಶವಲ್ಲ, ಅರಿವಿನ ಇಚ್ಛಾ ಶಕ್ತಿಭಾಷಾ ಸಾಮರ್ಥ್ಯ ಮತ್ತು ಅಂಧನಂಬಿಕೆ

ಇದು ನವ ವಿಕಸಿತ ಭಾರತ ಒಪ್ಪಿಕೊಂಡಿರುವ ನವ ಉದಾರವಾದದ ಮೂಲ ಲಕ್ಷಣ. ಕರ್ನಾಟಕ ಸರ್ಕಾರವನ್ನು ಬಡಿದೆಬ್ಬಿಸಿದ್ದು ಮೈಕ್ರೋಪಿನಾನ್ಸ್ ಎಂಬ ಮಾದರಿಯಲ್ಲ, ಬದಲಾಗಿ ಅದರಿಂದ ಉಂಟಾದ ಅನಾಹುತಗಳು, ಆತ್ಮಹತ್ಯೆಗಳು, ದುರ್ಬಲ ವರ್ಗಗಳ ನೋವು. ಹಲವು ವರ್ಷಗಳಿಂದ ದುರ್ಬಲ ವರ್ಗಗಳನ್ನು ಬಗೆದು ತಿನ್ನುತ್ತಿರುವ ಈ ತಿಮಿಂಗಿಲವನ್ನು ಸಹಿಸಿಕೊಂಡಿದ್ದ ವ್ಯವಸ್ಥೆಯನ್ನು ಕೆಲವರ ಸಾವುಗಳಾದರೂ ನಿದ್ರಾವಸ್ಥೆಯಿಂದ ಎಚ್ಚರಿಸುವೆ. ಆದರೆ ರಾಜ್ಯ ಸರ್ಕಾರ ಈ ಹಾವಳಿಯನ್ನು ನಿಯಂತ್ರಿಸಲು ಹೊರಡಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಲು ನಿರಾಕರಿಸಿರುವುದು ದುರದೃಷ್ಟಕರ . ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ಮೂಲತಃ ಸಾಲ ಮಸೂಲಾತಿಯ ನಿಯಮಗಳನ್ನು ನಿಗ್ರಹಿಸುವ ಹಾಗೂ ಕಾನೂನುಬಾಹಿರ ಮೈಕ್ರೋಫೈನಾನ್ಸ್ ಕಂಪನಿಗಳನ್ನು ನಿರ್ಬಂಧಿಸುವ ಶಾಸನವಾಗಿತ್ತು.

ಆರ್‌ಬಿಐ ವಿಧಿಸಿದ ನಿಯಮಗಳನ್ನು ಮೀರಿ ವಸೂಲಿ ಉಪಕ್ರಮಗಳನ್ನು ಕೈಗೊಳ್ಳುವ ಕಂಪನಿಗಳ ಅಮಾನುಷ ವಿಧಾನಗಳನ್ನು ನಿಗ್ರಹಿಸುವುದು ಸುಗ್ರೀವಾಜ್ಞೆಯ ಉದ್ದೇಶವಾಗಿತ್ತು. ಸುಗ್ರೀವಾಜ್ಞೆಯನ್ನು ತಿರಸ್ಕರಿಸಿರುವ ರಾಜ್ಯಪಾಲರಿಗೆ ಕಂಡ ಲೋಪಗಳು ಭಿನ್ನ. ಪ್ರಾಮಾಣಿಕ ಸಾಲದಾತರಿಗೆ ರಕ್ಷಣೆ ಇಲ್ಲ ಎಂಬ ರಾಜ್ಯಪಾಲರ ಆಕ್ಷೇಪದಲ್ಲೆ ಗೊಂದಲ ಇದೆ. ಪ್ರಾಮಾಣಿಕ- ನೊಂದಾಯಿತ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಆರ್‌ಬಿಐ ನಿಯಮಗಳೇ ರಕ್ಷಣೆ ಒದಗಿಸುತ್ತಿವೆ. ಆದರೆ ಈ ಕಂಪೆನಿಗಳು ಆರ್‌ಬಿಐ ನಿಬಂಧನೆಗಳನ್ನು ಉಲ್ಲಂಘಿಸಿ ಅನುಸರಿಸುವ ವಸೂಲಿ ಉಪಕ್ರಮಗಳು, ಬಡ ಕುಟುಂಬಗಳಿಗೆ ,ವಿಶೇಷವಾಗಿ ಮಹಿಳೆಯರಿಗೆ ನೀಡುವ ಕಿರುಕುಳ ಹಾಗೂ ಬೆದರಿಕೆಯ ತಂತ್ರಗಳನ್ನು ನಿಗ್ರಹಿಸುವುದು ಸರ್ಕಾರದ ಕರ್ತವ್ಯ ಅಲ್ಲವೇ? ಈಗಿರುವ ಕಾನೂನುಗಳ ಅಡಿಯಲ್ಲಿ ಇದನ್ನು ನಿರ್ವಹಿಸಬಹುದು ಎಂದು ರಾಜ್ಯಪಾಲರು ಹೇಳಿದ್ದಾರೆ. ಆದರೆ ಅದರಲ್ಲಿರುವ ತೂತುಗಳು ಎಷ್ಟು ಎನ್ನುವುದನ್ನು ಗಮನಿಸಬೇಕಲ್ಲವೇ?


ಸುಗ್ರೀವಾಜ್ಞೆಯಲ್ಲಿ ವಿಧಿಸಿರುವ ಶಿಕ್ಷೆಯ ಪ್ರಮಾಣ ‘ಬಹಳ ಕಠಿಣ’ ಎನ್ನುವುದು ವಾಸ್ತವ. ಆದರೆ ಬಡವರ ಜೀವ ತೆಗೆಯುವ ವಸೂಲಿಕಾರರ ದೌರ್ಜನ್ಯಗಳಿಗೆ ‘ಮೃದು ಶಿಕ್ಷೆ’ ವಿಧಿಸಿದರೆ ಸಾಕೇ? ಇದರಿಂದ ಮೈಕ್ರೋ ಫೈನಾನ್ಸ್ ಮಾರುಕಟ್ಟೆಗೆ ಹೊಡೆತ ಬೀಳುತ್ತದೆ ಎನ್ನುವುದು ಅರ್ಧ ಸತ್ಯ. ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರದ ಆದ್ಯತೆ ಶೋಷಕ ಮಾರುಕಟ್ಟೆಯನ್ನು ರಕ್ಷಿಸುವುದಿಲ್ಲ, ಬದಲಾಗಿ ಅದರಿಂದ ಶೋಷಣೆಗಳಿಗಾಗುವ ನೊಂದವರ ರಕ್ಷಣೆ ಸರ್ಕಾರದ ನೈತಿಕ ಕರ್ತವ್ಯ. ಆದರೆ ರಾಜ್ಯಪಾಲರು ನೀಡಿರುವ ಕಾರಣಗಳು ಇದಕ್ಕೆ ವ್ಯತಿರಿಕ್ತವಾಗಿವೆ.
ಶೋಷಿತರ ಸಹನೆಯನ್ನು ಶೋಷಣೆಗೆ ಒಳಪಡಿಸುವ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮನೆ -ಮಠ ,ಆಸ್ತಿ, ಕುಟುಂಬದ ಆಶ್ರಯದಾತರು ಸೇರಿದಂತೆ ಎಲ್ಲವನ್ನು ಕಳೆದುಕೊಂಡ ನೊಂದವರು, ಅನಾಥರಾದ ಮಕ್ಕಳು ಯಾರ ಬಾಗಿಲು ಬಡಿಯಬೇಕು?

Leave a Comment