ಒಂದು ಪಾದಯಾತ್ರೆ ಹತ್ತಾರು ಜೀವನ ಪಾಠ
ಪಾದಯಾತ್ರೆ ಎಂದರೆ ಸುಮ್ಮನೆ ನಡೆದುಕೊಂಡು ಹೋಗುವುದು ಎಂದುಕೊಂಡಿದ್ದೆವು. ಆದರೆ ದಾರಿಯುದ್ದಕ್ಕೂ ಅಷ್ಟೊಂದು ಜನರನ್ನು ಭೇಟಿ ಮಾಡುತ್ತೇವೆ, ಕುಳಿತು ಮಾತಾಡುತ್ತೇವೆ. ಹೊಸ ವಿಷಯಗಳನ್ನು ಕಲಿಯುತ್ತೇವೆ ಎಂದುಕೊಂಡಿರಲಿಲ್ಲ. ಹಸಿವು, ದಣಿವು, ಜನರ ಕಷ್ಟನಷ್ಟಗಳೇನು, ಪರಿಸರ ಎಂದರೆ, ಅಭಿವೃದ್ಧಿ ಎಂದರೆ ಏನು ಎಂಬುದು ಆಗ ಗೊತ್ತಾಯಿತು. ಬೈಕಿನಲ್ಲೋ, ಬಸ್ಸಿನಲ್ಲೋ, ರೈಲಿನಲ್ಲೋ ಹೋಗಿದ್ದರೆ ಸುಮ್ಮನೆ ಹೋಗಿಬಂದಂತಾಗುತ್ತಿತ್ತಷ್ಟೇ..
ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಮೂರ್ನಾಲ್ಕು ಕಿ.ಮೀ. ದೂರದಲ್ಲಿ, ಜನಪದ ಸೇವಾ ಟ್ರಸ್ಟ್ನ ‘ಹೊಸ ಜೀವನ ದಾರಿ’ತರಬೇತಿ ಕೇಂದ್ರದ ಆವರಣದಲ್ಲಿದ್ದ ಮರಗಳ ನೆರಳಿನಲ್ಲಿ ಕುಳಿತು ನೆನಪುಗಳೊಳಗೆ ಜಾರಿದ ಹೇಮಂತ, ಪುಷ್ಕರ, ರಜೀಕ್ ಸಾಬ್, ಲೋಕೇಶ, ಅಜಿತ್, ಪ್ರೀತಂ ಅವರ ಕಣ್ಣಳಲ್ಲಿ ಅಪೂರ್ವ ಎನ್ನಿಸುವ ಬೆಳಕಿತ್ತು. ಹೊಳಪಿತ್ತು.
ಮಾತಿಗೆ ಕುಳಿತುಕೊಳ್ಳುವ ಮುನ್ನ ಅವರು ಗಾಣದಿಂದ ಎಣ್ಣೆ ತೆಗೆಯುತ್ತಿದ್ದರು. ಖಾದಿ ಬಟ್ಟೆ ನೇಯುತ್ತಿದ್ದರು. ಬಟ್ಟೆಗಳಿಗೆ ಸಹಜ ಬಣ್ಣ ತುಂಬುತ್ತಿದ್ದರು. ಅದು ಅವರ ಕಲಿಕೆ-ಗಳಿಕೆಯ ಕಾಯಕ. ಅದೇ ಅವರ ಸದ್ಯದ ಜೀವನದ ದಾರಿ.ಹುತಾತ್ಮರ ದಿನ’ದ ಅಸುಪಾಸಿನಲ್ಲಿ ಪಾದಯಾತ್ರೆ ಶುರುವಾದಾಗ ಕೆಲವರಿಗಷ್ಟೇ ಅದೇನೆಂದು ಗೊತ್ತಿತ್ತು. ಕೆಲವರಿಗೆ ಅದು ಪೂರ್ಣ ಹೊಸತು. ಆ ಆರೂ ಮಂದಿ, ಸಾಂಪ್ರದಾಯಿಕ ಬೋಧನೆ-ಕಲಿಕೆಯನ್ನು ಒಲ್ಲೆ ಎಂದು ಶಾಲೆಯನ್ನೇ ಬಿಟ್ಟು ಬಂದ ಹದಿಹರೆಯದ ಹುಡುಗರು. ಶಾಲೆಯ ಒಟ್ಟಾರೆ ವ್ಯವಸ್ಥೆಯನ್ನೇ ಧಿಕ್ಕರಿಸಿ ದೂರ ನಿಂತವರು. ಅಶಿಸ್ತಿಗೇ ಅಂಟಿಕೊಂಡಿದ್ದವರು. ಅದೇ ಕಾರಣಕ್ಕೆ ಪೋಷಕರೊಂದಿಗೂ ಭಿನ್ನಾಭಿಪ್ರಾಯ ಎದುರಿಸಿದವರು. ದಿಕ್ಕಾಪಾಲಾಗಿದ್ದವರು. ಈಗ ಒಟ್ಟಾದವರು.
ಅವರೊಂದಿಗೆ ಇದ್ದು ದಾರಿ ತೋರಿದವರು, ಮಹಾತ್ಮ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸನ್ನು ಅವರ ಮೂಲಕವೇ ಈ ಕಾಲಘಟ್ಟದಲ್ಲಿ ಮತ್ತೆ ಕಟ್ಟಬಹುದೇ ಎಂಬ ಹೊಸ ಕನಸಿನೊಂದಿಗೆ ಸಾಗುತ್ತಿರುವ ಪ್ರಯೋಗಶೀಲರು. ಈ ಹಿರಿಯರಿಗೆ ಇದು ಎರಡನೇ ಪಾದಯಾತ್ರೆ ಮೊದಲನೆಯದ್ದು ಹಿಂದಿನ ವರ್ಷ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ನಡೆದಿತ್ತು.
ಪುಸ್ತಕದ ಓದು ಬರಹಕ್ಕಿಂತಲೂ, ಪಾದಯಾತ್ರೆಯ ಮೂಲಕವೇ ಲೋಕವನ್ನು ಗ್ರಹಿಸುವ ಪಾಠಗಳನ್ನು ಹುಡುಗರಿಗೆ ಪರಿಚಯಿಸುವ ಪ್ರಯತ್ನ ಇದು. ದೇಹ-ಮನಸ್ಸು ಎರಡರ ಶ್ರಮವನ್ನು ಸಂಪೂರ್ಣವಾಗಿ ಬೇಡುವ ಯಾತ್ರೆ.
ಬಿಸಿಲು ನೆರಳೆನ್ನದೆ ನಡೆಯುತ್ತಲೇ ಊರು-ಕೇರಿ, ಜನರ ಕಷ್ಟಸುಖದೊಂದಿಗೆ ಬೆಸೆದುಕೊಳ್ಳುವ ಪರಿ ತಮ್ಮ ಬದುಕಿಗೂ ಕನ್ನಡಿ ಹಿಡಿದುಕೊಳ್ಳುವ ಅಪೂರ್ವ ಅವಕಾಶ. ದೇವರು, ದಿಂಡಿರ ಮೇಲಿನ ಭಕ್ತಿಗೆ ವಾರಾಂತ್ಯದ ಮನೋಲ್ಲಾಸಕ್ಕೆ, ದೇಹಸೌಖ್ಯಕ್ಕೆ ಬೆಟ್ಟಗುಡ್ಡಗಳಲ್ಲಿ ನಡೆಯುವುದು ಬೇರೆ. ಅದನ್ನು ಚಾರಣ, ಧಾರ್ಮಿಕ ಪಾದಯಾತ್ರೆ ಇತ್ಯಾದಿ ಎನ್ನೋಣ. ಜನಸೇವೆಯ ತೋರ್ಪಡಿಕೆಯ ರಾಜಕೀಯ ಪಾದಯಾತ್ರೆಗಳನ್ನೂ ಮರೆಯದಿರೋಣ. ಆದರೆ, ಈ ಹುಡುಗರನ್ನು ಜನರನ್ನು, ಜಗತ್ತನ್ನು ಸಣ್ಣ ವಯಸ್ಸಿಗೇ ಅರಿಯುವಯತ್ನ. ಆ ಮೂಲಕ ತಮ್ಮನ್ನೂ ಅರಿತುಕೊಳ್ಳುವ ಯತ್ನ.
ಇದನ್ನೂ ಓದಿ:ರಾಜ್ಯ ಸರ್ಕಾರಕ್ಕೆ ₹10 ಲಕ್ಷ ದಂಡ
ಒಂದು ಪಾದಯಾತ್ರೆಯಲ್ಲಿ ಹಲವು ನೋಟ, ಸಾಂಗತ್ಯ, ಹತ್ತಾರು ಕಥೆ, ಅಪರಿಮಿತ ಜೀವನದ್ರವ್ಯ, ಮೊಗೆದಷ್ಟೂ ಬೊಗಸೆ ತುಂಬುವ ಅಚ್ಚರಿದಾಯಕ ಪಾಠಗಳು. ನಡೆವ ನೆಲದೊಂದಿಗೆ ಒಂದಾದರಷ್ಟೇ ಸಿಗುವಂಥವು- ದಣಿವು, ವಿಶ್ರಾಂತಿಗಳ ಅರ್ಥಪೂರ್ಣ ಸಂಯೋಗ, ಜೀವನದ ಅರ್ಥದ ಹುಡುಕಾಟಕ್ಕೂ ದಾರಿ. ಇದು ಅವರು ಕೇಂದ್ರದಲ್ಲಿ ಕಲಿಯುತ್ತಿರುವ ಪಾಠಗಳಲ್ಲಿ ಪ್ರಮುಖವಾದದ್ದು.
ಮಲೆಮಹದೇಶ್ವರ ಬೆಟ್ಟ ಪ್ರದೇಶದ ತಪ್ಪಲಿನಲ್ಲಿರುವ ಮಾರ್ಟಳ್ಳಿಯಲ್ಲಿ ನಾಟಿ ಬೀಜಗಳು ಮತ್ತು ಸಾವಯವ ಕೃಷಿಜಾಗೃತಿಯಲ್ಲಿ ತೊಡಗಿರುವ ‘ಅನೀಶಾ’ ಸಂಸ್ಥೆಗೆ ಭೇಟಿ ನೀಡುವುದರಿಂದ ಆರಂಭವಾದ ಪಾದಯಾತ್ರೆಯು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳುವಿನಲ್ಲಿ ಮುಗಿಯುವ ಹೊತ್ತಿಗೆ ಈ ಹುಡುಗರು 200ಕ್ಕೂ ಹೆಚ್ಚು ಕಿ.ಮೀ. ನಡೆದಿದ್ದರು. ನಗರ, ಪಟ್ಟಣಗಳ ಜೊತೆಗೆ 20ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿ ನೀಡಿದ್ದರು. ಪ್ರತಿ ಹಳ್ಳಿಯ ಹತ್ತಾರು ಮಂದಿ ಸೇರಿದಂತೆ ನೂರಾರು ಜನಸಾಮಾನ್ಯರೊಂದಿಗೆ, ಹತ್ತಾರು ಸಂಘಟಕರೊಂದಿಗೆ ಮಾತನಾಡಿದ್ದರು.
ರಾಮಾಪುರ, ಹನೂರು, ಲೊಕ್ಕನಹಳ್ಳಿ, ಒಡೆಯರಪಾಳ್ಯದ ಟಿಬೆಟಿಯನ್ ಸೆಟ್ಸ್ಮೆಂಟ್, ಹಿರಿಯಂಬಲ, ಗೇರುಮಾಳ, ಪುಣಜನೂರು, ಪಾಳ್ಯ, ಕೋಳಿ ಬಸವಾಪುರ, ಚಾಮರಾಜನಗರ, ಹಂಗಳ, ಪಾರ್ವತಿಬೆಟ್ಟ, ಕೆಂದೇಗಾಲ, ಮಲೆಯೂರು ಹೀಗೆ ಸುತ್ತಾಡಿದ ಊರುಗಳಲ್ಲಿ ಒಂದೊಂದೂ ಅನನ್ಯ. ಜನರ ವಲಸೆ, ಧರ್ಮದ ಮೇಲಿನ ನಂಬಿಕೆ, ಭೌಗೋಳಿಕ ರಾಜಕೀಯ, ಕೂಲಿ ಕೆಲಸ, ಜಾತಿ, ಲಿಂಗ ವ್ಯವಸ್ಥೆಯ ಮೇಲಾಟಗಳು, ದಲಿತರ ಮೇಲಿನ ದೌರ್ಜನ್ಯಗಳು, ಮಾನವ-ಪ್ರಾಣಿ ಸಂಘರ್ಷ, ಭೂಕಬಳಿಕೆ, ಖಾದಿ, ಗ್ರಾಮೋದ್ಯೋಗ ಹೀಗೆ… ಎದುರಾದ ವಿಚಾರಗಳು ಒಂದೆರಡಲ್ಲ.
ಮೇಲುಕೋಟೆಯಿಂದ ವಾಹನದಲ್ಲಿ ‘ಅನೀಶಾ’ ಸಂಸ್ಥೆಯವರೆಗೆ ಹೋಗಿ, ಅಲ್ಲಿ ಸಹಜ ಕೃಷಿ, ನಾಟಿ ಬೀಜಗಳ ಸಂರಕ್ಷಣೆಯ ಬಗ್ಗೆ ಅರಿತಿದ್ದು, ಮಾರ್ಟಳ್ಳಿಗೆ ನಡಿಗೆ, ಅಲ್ಲಿನ ಕ್ರಿಶ್ಚಿಯನ್ನರೊಂದಿಗೆ ಮಾತನಾಡುವಾಗ ಶವಪೆಟ್ಟಿಗೆಗಳನ್ನು ತಯಾರಿಸುತ್ತಿದ್ದವರೊಂದಿಗೆ ಅಚಾನಕ್ಕಾಗಿ ಮಾತನಾಡಿದ್ದು, ಚುರುಗುಟ್ಟುವ ಬಿಸಿಲಿನಲ್ಲಿ ಪಾರ್ವತಿ ಬೆಟ್ಟದ ಜೀವವೈವಿಧ್ಯತೆಗೆ ಮುಖಾಮುಖಿಯಾದ ಸನ್ನಿವೇಶ, ಪುಣಜನೂರಿನಲ್ಲಿ ಸಾಮಾಜಿಕ ಹೋರಾಟಗಾರ ದೊರೆಸ್ವಾಮಿ ಅವರೊಂದಿಗೆ, ಸೋಲಿಗ ಸಮುದಾಯದವರೊಂದಿಗೆ ಅದಿವಾಸಿಗಳ ಬಗೆಹರಿಯದ ಬದುಕಿನ ಸಮಸ್ಯೆಗಳ ಬಗ್ಗೆ ಚರ್ಚೆ, ನ್ಯಾಚುರಲಿಸ್ಟ್ಗಳಾದ ಕೆ.ಮನು ಮತ್ತು ಶ್ರೀಕಂಠ ಅವರು ಹೆಜ್ಜೆ ಹಾಕುತ್ತಲೇ ಹೇಳಿದ ಪರಿಸರದ ಪಾಠಗಳು, ಮಾತೃಭೂಮಿಯ ಮೇಲೆ ಟಿಬೆಟನ್ನರ ಅಪಾರ ಪ್ರೀತಿ… ಹೀಗೆ ಪಾದಯಾತ್ರೆ ಅನೇಕ ಅನೂಹ್ಯ ಅನುಭವಗಳಿಗೆ ಕರೆದೊಯ್ದಿತ್ತು.
‘ಬೆಳಿಗ್ಗೆ ಪ್ರಾರ್ಥನೆ, ಉಪಾಹಾರದ ನಂತರ ಶುರುವಾಗುತ್ತಿದ್ದ ಪಾದಯಾತ್ರೆ ಕನಿಷ್ಠ 15-20 ಕಿ.ಮೀ. ವರೆಗೂ ನಡೆಯುತ್ತಿತ್ತು. ಅಷ್ಟರಲ್ಲಿ ಸಿಗುತ್ತಿದ್ದ ಹಳ್ಳಿಯಲ್ಲೇ ಊಟ, ವಾಸ್ತವ್ಯ, ಊಟವೇನು? ತಿಳಿದಿಲ್ಲ. ರಾತ್ರಿ ವಾಸ್ತವ್ಯ ಹೇಗಿರುತ್ತದೆ? ಗೊತ್ತಿಲ್ಲ.