ದೆಹಲಿಯಲ್ಲಿ ಎಎಪಿ ಸೋತಿದ್ದೇಕೆ?

ಪಕ್ಷದಲ್ಲಿ ಅನಿಶ್ಚಿತತೆ ಮನೆ ಮಾಡಿದ್ದರೂ ರಾಜಧಾನಿಯಲ್ಲಿ ಅದು ಪೂರ್ತಿ ಕುಸಿದು ಬಿದ್ದಿಲ್ಲ

ದೆಹಲಿಯಲ್ಲಿ ಎಎಪಿ ಸೋತಿದ್ದೇಕೆ?

ಆಮ್ ಆದ್ಮಿ ಪಕ್ಷದ (ಎ ಎ ಪಿ) ಪಾಲಿನ ಬಲಿಷ್ಠ ಕೋಟೆ ಎನ್ನಲಾಗಿದ್ದ ದೆಹಲಿಯಲ್ಲಿ ಆ ಪಕ್ಷದ ಹತ್ತು ವರ್ಷಗಳ ಆಡಳಿತ ಕೊನೆಗೊಂಡಿದೆ. ಅಲ್ಲಿ ಅದು ಬಿಜೆಪಿಗೆ ಅಧಿಕಾರ ಬಿಟ್ಟು ಕೊಟ್ಟಿದೆ, ಬಿಜೆಪಿಯು ದೆಹಲಿಯಲ್ಲಿ 27 ವರ್ಷಗಳ ನಂತರದಲ್ಲಿ ಅಧಿಕಾರಕ್ಕೆ ಮರಳಿದೆ. ದೇಶದ ರಾಜಧಾನಿಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕಾಂಗ್ರೆಸ್ ಪಕ್ಷವು ಸತತ ಮೂರನೆಯ ಬಾರಿಗೆ ಶೂನ್ಯ ಸಂಪಾದಿಸಿದೆ. ಬಿಜೆಪಿಯು ದೆಹಲಿಯಲ್ಲಿ ಎಎಪಿಗೆ ಮಾತ್ರ ಭಾರಿ ಏಟು ಕೊಟ್ಟಿಲ್ಲ, ಆ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಆವರಿಗೂ ಪೆಟ್ಟು ಕೊಟ್ಟಿದೆ.
ದೆಹಲಿಯು ಬಿಜೆಪಿಯ ಪಾಲಿಗೆ ಬಹುಕಾಲದಿಂದ ಮರೀಚಿಕೆಯಾಗಿತ್ತು. ಅಲ್ಲಿ ಬಿಜೆಪಿ ಯಶಸ್ಸು ಸಾಧಿಸಿದ್ದು ಹೇಗೆ? ಹಿಂದುತ್ವವಾದಿ ಪಕ್ಷ ಎಂದೇ ಹೆಸರಾಗಿರುವ ಬಿಜೆಪಿಯು ಪ್ರತಿ ಚುನಾವಣೆಯನ್ನೂ ಬಹಳ ಗಂಭೀರವಾಗಿ ಪರಿಗಣಿಸುತ್ತದೆ, ಚುನಾವಣಾ ಯೋಜನೆಯನ್ನು ಬಹಳ ಸೂಕ್ಷ್ಮವಾಗಿ ಸಿದ್ಧಪಡಿಸುತ್ತದೆ, ವಿರೋಧ ಪಕ್ಷಗಳ ಶಕ್ತಿ ಮತ್ತೆ ದೌರ್ಬಲ್ಯವನ್ನು ಗುರುತಿಸುತ್ತದೆ, ಸ್ಪಷ್ಟ ಕಾರ್ಯತಂತ್ರ ಜಾರಿಗೆ ತರುತ್ತದೆ ಹಾಗೂ ತನ್ನ ಲೋಪಗಳನ್ನು ಸರಿಪಡಿಸಿಕೊಳ್ಳುತ್ತದೆ. ಈ ಬಾರಿ ದೆಹಲಿಯ ಆಡಳಿತವನ್ನು ಎಎಪಿ ಯಿಂದ ಕಿತ್ತುಕೊಳ್ಳಬೇಕು ಎಂದು ಬಿಜೆಪಿ ದೃಢ ನಿಶ್ಚಯ ಮಾಡಿತ್ತು.
ಇದಕ್ಕೆ ಬಿಜೆಪಿಯು ಬಹಳ ಪರಿಪೂರ್ಣ ಯೋಜನೆಯೊಂದಿಗೆ ಕೆಲಸ ಮಾಡಿತು ಎಂಬುದನ್ನು ಫಲಿತಾಂಶವು ಹೇಳುತ್ತಿದೆ. ಬೂತ್ ಮಟ್ಟದ ನಿರ್ವಹಣೆ, ಜನ ಸಂಪರ್ಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹವು ಚುನಾವಣೆಗೂ ಆರು ತಿಂಗಳು ಮೊದಲು ಆರಂಭವಾದವು. ಬಿಜೆಪಿಯ ಸೈದ್ದಾಂತಿಕ ಮಾತೃ ಸಂಘಟನೆ ಆರ್ ಎಸ್ ಎಸ್ ತಳಮಟ್ಟದಲ್ಲಿ ಕೆಲಸ ಆರಂಭಿಸಿತು. ಬಿಜೆಪಿಯು ಅಭ್ಯರ್ಥಿಗಳನ್ನು ಬಹಳ ಜಾಗರೂಕವಾಗಿ ಆಯ್ಕೆ ಮಾಡಿತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿಯು ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಗಮನ ನೀಡಿತು. ಅದರ ನಾಯಕ ಕೇಜ್ರಿವಾಲ್ ವಿರುದ್ಧದ ಆರೋಪಗಳ ಬಗ್ಗೆಯೂ ಗಮನಹರಿಸಿತು.


ಅಬಕಾರಿ ಹಗರಣದ ಆರೋಪ ಎಎಪಿಗೆ ಅದಾಗಲೇ ಪೆಟ್ಟು ಕೊಟ್ಟಿತ್ತು, ಕೇಜ್ರಿವಾಲ್ ಸೇರಿದಂತೆ ಆ ಪಕ್ಷದ ನಾಲ್ವರು ನಾಯಕರು ಜೈಲಿಗೆ ಹೋಗಿ ಬಂದಿದ್ದರು. ಮೂಲ ಸೌಕರ್ಯ ಕೊರತೆ, ತ್ಯಾಜ್ಯ ವಿಲೇವಾರಿ ಸಮಸ್ಯೆ, ಮುಂಗಾರು ಸಂದರ್ಭದಲ್ಲಿ ಸೃಷ್ಟಿಯಾಗುವ ಸಮಸ್ಯೆಗಳು,ವಾಯುಮಾಲಿನ್ಯಕ್ಕೆ ಕೊನೆಯೇ ಇಲ್ಲದಿರುವುದು…ಇಂತಹ ಸಮಸ್ಯೆಗಳನ್ನೂ ಬಿಜೆಪಿಯು ಪ್ರಧಾನವಾಗಿ ಉಲ್ಲೇಖಿಸಿತು. ಮೂರು ವಿಷಯಗಳನ್ನು ಬಹಳ ಮುಖ್ಯವಾಗಿ ಪ್ರಸ್ತಾಪಿಸಿತು: ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಕೇಜ್ರೀವಾಲ್ ಅವರು 10 ವರ್ಷಗಳ ಹಿಂದೆಯೇ ಹೇಳಿದ್ದರು ಅದು ಇನ್ನು ಸ್ವಚ್ಛಗೊಂಡಿಲ್ಲ; ಸರ್ಕಾರಿ ಬಂಗಲೆಯನ್ನು ಕೇಜ್ರೀವಾಲ್ ಅವರು ಐಶಾರಾಮಿ ನಿವಾಸವಾಗಿಸಿಕೊಂಡಿದ್ದಾರೆ ಎಂಬ ಆರೋಪ ಮತ್ತು ಅಬಕಾರಿ ಹಗರಣ.


ಭ್ರಷ್ಟಾಚಾರ ವಿರೋಧಿ ಹೋರಾಟ ಒಂದರ ಮೂಲಕ ಜನಿಸಿದ ಪಕ್ಷವು ರಾಜಕೀಯದಿಂದ ಭ್ರಷ್ಟಾಚಾರವನ್ನು ನಿರ್ಮೂಲ ಗೊಳಿಸುವುದಾಗಿ ಶಪಥ ಮಾಡಿರುವ ಪಕ್ಷವು ಐಶಾರಾಮಿ ಸೌಲಭ್ಯಗಳನ್ನು ನಿರಾಕರಿಸುವುದಾಗಿ ಹೇಳುವ ಪಕ್ಷವು ಭ್ರಷ್ಟಾಚಾರದಲ್ಲಿ ತೊಡಗಿದೆ, ಐಷಾರಾಮಿ ಸೌಲಭ್ಯಗಳನ್ನು ಅನುಭವಿಸುತ್ತಿದೆ ಎಂದು ಬಿಜೆಪಿ ಮತ್ತೆ ಮತ್ತೆ ಹೇಳಿತು. ಕೇಜ್ರೀವಾಲ್ ಅವರು ಬಹಳ ಅಹಂಕಾರಿ ಆಗಿದ್ದಾರೆ ಎಂದು ದೂರಿತು. ಹೀಗಿದ್ದರೂ ಎಎಪಿಯನ್ನು ಸೋಲಿಸುವುದು ಸುಲಭವಾಗಿರಲಿಲ್ಲ. ಉಚಿತ ವಿದ್ಯುತ್, ಉಚಿತ ನೀರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಮೆಟ್ರೊ ಸೌಲಭ್ಯ ದಂತಹ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದು, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತಂದು ಎಎಪಿಯು ದೆಹಲಿ ಜನರ ಮನಸ್ಸಿನಲ್ಲಿ 10 ವರ್ಷಗಳಿಂದ ಮನೆ ಮಾಡಿಕೊಂಡಿತ್ತು ಬಿಜೆಪಿ -ಆರ್ ಎಸ್ ಎಸ್ ಕಾರ್ಯಕರ್ತರ ಮಾದರಿಯಲ್ಲೇ ಎಎಪಿ ಕೂಡ ತಳ ಮಟ್ಟದಲ್ಲಿ ಬದ್ಧತೆಯ ಕಾರ್ಯಕರ್ತರ ಪಡೆಯನ್ನು ಹೊಂದಿದೆ.
ಚುನಾವಣಾ ಪ್ರಚಾರ ಅಭಿಯಾನವನ್ನು ಬಹಳ ಜಾಗರೂಕತೆಯಿಂದ ರೂಪಿಸಿದ ಬಿಜೆಪಿಯು ಎಎಪಿಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಟೀಕಿಸಬಾರದು ಎಂದು ತೀರ್ಮಾನಿಸಿತು.

ಈ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಚುನಾವಣೆ ಸಂದರ್ಭದಲ್ಲಿ ‘ರೇವ್ಡಿ’ ಎಂದು ಕರೆದಿದ್ದರು. ಎಎಪಿ ಜಾರಿಗೆ ತಂದ ಎಲ್ಲಾ ಜನಪ್ರಿಯ ಯೋಜನೆಗಳು ತಾನು ಅಧಿಕಾರಕ್ಕೆ ಬಂದ ನಂತರವೂ ಜಾರಿಯಲ್ಲಿ ಇರುತ್ತವೆ ಎಂದು ಬಿಜೆಪಿ ಭರವಸೆ ನೀಡಿತು. ಇದನ್ನು ಜನ ನಂಬಿದರು. ತಾನು ಕೂಡ ಬಹಳಷ್ಟು ಯೋಜನೆಗಳನ್ನು ಜಾರಿಗೆ ತರುವ ಭರವಸೆ ಇಟ್ಟಿತು. ಮತದಾನಕ್ಕೆ ನಾಲ್ಕು ದಿನ ಇದೆ ಎಂದಾಗ, ಕೇಂದ್ರ ಬಜೆಟ್ ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ಕೆಲವು ಘೋಷಣೆಗಳನ್ನು ಮಾಡಲಾಯಿತು. ಈ ಘೋಷಣೆಗಳು ದೆಹಲಿಯ ಮಧ್ಯಮ ವರ್ಗವು (ದೆಹಲಿಯ ಒಂದು 1.55 ಕೋಟಿ ಮತದಾರರ ಪೈಕಿ ಶೇಕಡ 60ರಷ್ಟು ಮಂದಿ ಮಧ್ಯಮ ವರ್ಗದವರು ಎಂಬ ಅಂದಾಜು ಇದೆ) ಬಿಜೆಪಿಯ ಕಡೆ ವಾಲುವಂತೆ ಮಾಡಿದವು. ಈ ನಡುವೆ ಕೇಂದ್ರ ಸರ್ಕಾರವು ಎಂಟನೆಯ ವೇತನ ಆಯೋಗವನ್ನು ರಚಿಸುವುದಾಗಿ ಘೋಷಿಸಿತು. ಇದು ಕೇಂದ್ರ ಸರ್ಕಾರದ ನೌಕರರು ಬಿಜೆಪಿಯನ್ನು ಬೆಂಬಲಿಸುವಂತೆ ಮಾಡಿತು.


ಬೇರೆ ಬೇರೆ ಸಮುದಾಯಗಳು, ವಲಸಿಗರು, ಆರ್ಥಿಕವಾಗಿ ಭಿನ್ನ ನೆಲೆ ಹೊಂದಿರುವವರು ಸೇರಿದಂತೆ ಹಲವು ಸಮುದಾಯಗಳ ಜೊತೆ ಬಿಜೆಪಿ ಸಂವಾದ ನಡೆಸಿತು. ಹಿಂದಿನ ಎರಡು ಚುನಾವಣೆಗಳಲ್ಲಿ ಈ ಸಮುದಾಯಗಳು ಸಾರಾಸಗಟಾಗಿ ಎಎಪಿಗೆ ಮತ ಚಲಾಯಿಸಿದ್ದವು. 2020ರಲ್ಲಿ ನಡೆಸಿದಂತಹ ತೀರಾ ಧ್ರುವೀಕರಣಗೊಂಡ ಚುನಾವಣಾ ಪ್ರಚಾರದ ಬದಲು ಬಿಜೆಪಿಯು ಈ ಬಾರಿ ಕಡಿಮೆ ವಿಭಜನಕಾರಿ ಮಾರ್ಗವನ್ನು ತುಳಿಯಿತು. ಏಕೆಂದರೆ ಕೇಜ್ರಿವಾಲ್ ಅವರ ಮೃದು ಹಿಂದುತ್ವದ ಹಾದಿ ಬಿಜೆಪಿಗೆ ಗೊತ್ತಿತ್ತು.

ಇದನ್ನೂ ಓದಿ:ಒಂದು ಪಾದಯಾತ್ರೆ…

ಎ ಎ ಪಿ ಹಾಗೂ ಅವರ ಸೋಲು ಪಕ್ಷಕ್ಕೆ ಭಾರಿ ಸಮಸ್ಯೆ ಸೃಷ್ಟಿಸಿದೆ. ಎಎಪಿ ಸೋತಿದ್ದಕ್ಕೆ ಕಾರಣಗಳೇನು? ‘ಭ್ರಷ್ಟಾಚಾರದ ವಿರುದ್ದ‌ ಭಾರತ’ ಆಂದೋಲನದ ಮೂಲಕ ಜನಿಸಿದ, ಭ್ರಷ್ಟಾಚಾರದ ವಿಚಾರದಲ್ಲಿ ನೈತಿಕವಾಗಿ ಬಹಳ ಎತ್ತರದ ನಿಲುವು ಹೊಂದಿರುವುದಾಗಿ ಹೇಳಿಕೊಂಡ ಎಎಪಿ ಆರಂಭದಿಂದಲೂ ಈ ತತ್ವಗಳನ್ನು ಗಾಳಿಗೆ ತೂರಿದಂತೆ ಕಾಣುತ್ತಿತ್ತು. ಪಕ್ಷವು ಅಬಕಾರಿ ಹಗರಣದಲ್ಲಿ,ಶೀಷಮಹಲ್ ವಿವಾದದಲ್ಲಿ ಸಿಲುಕಿತು. ಕೇಜ್ರೀವಾಲ್ ಮತ್ತು ಕೇಂದ್ರ ಸರ್ಕಾರದ ನಡುವಿನ ನಿತ್ಯದ ದೋಷಾರೋಪಗಳು, ಜನ ಕಲ್ಯಾಣ ಕ್ರಮಗಳಿಗೆ ಅನುಮೋದನೆಯನ್ನು ಕೇಂದ್ರ ತಡೆ ಹಿಡಿಯುತ್ತಿದೆ ಎಂದು ಆರೋಪಿಸಿದವು ಬಹುಶಃ ಜನರಿಗೆ ಇಷ್ಟವಾಗಲಿಲ್ಲ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಸರ್ಕಾರದಿಂದ ನಿರಂತರವಾಗಿ ಸ್ಪಷ್ಟನೆಗಳನ್ನು ಕೇಳುವ ಮೂಲಕ, ಸರ್ಕಾರ ಕಳುಹಿಸಿದ ಪ್ರಸ್ತಾವಗಳಿಗೆ ಅಡ್ಡಿಗಳನ್ನು ಸೃಷ್ಟಿಸುವ ಮೂಲಕ ವಿವಾದ ಉಂಟು ಮಾಡಿದರು. ಇದು ಜನರ ತಾಳ್ಮೆಯನ್ನು ಪರೀಕ್ಷಿಸಿತು.


ಹೀಗಿದ್ದರೂ ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟದ ಕಾಂಗ್ರೆಸ್, ಎಸ್ ಸಿ ಪಿ (ಎಸ್ ಪಿ) ಮತ್ತು ಶಿವಸೇನ (ಯು ಬಿ ಟಿ) ಪಕ್ಷಗಳು ಕುಸಿದು ಬಿದ್ದಂತೆ, ಎಎಪಿಯು ದೆಹಲಿಯಲ್ಲಿ ಪೂರ್ತಿಕುಸಿದು ಬಿದ್ದಿಲ್ಲ. ಅದು ದೆಹಲಿಯಲ್ಲಿ ಶೇ 43.6 ರಷ್ಟು ಮತಗಳನ್ನು ಪಡೆದಿದೆ. ಇದು ಬಹುಮತ ಪಡೆದಿರುವ ಬಿಜೆಪಿಗೆ ಸಿಕ್ಕ ಶೇಕಡಾವಾರು ಮತಗಳಿಗೆ ಹೋಲಿಸಿದರೆ ಶೇಕಡ ಎರಡರಷ್ಟು ಮಾತ್ರ ಕಡಿಮೆ. ಅಂದರೆ ದೆಹಲಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತದಾರರು ಈಗಲೂ ಎಎಪಿ ಜೊತೆ ಇದ್ದಾರೆ.


ಎಎಪಿ ಪಾಲಿಗೆ ಕಾಂಗ್ರೆಸ್ ಮುಳುವಾಯಿತೆ? ಹೌದು. ಕಾಂಗ್ರೆಸ್ ಪಕ್ಷವು ಒಂದು ಸ್ಥಾನ ಕೂಡ ಗೆಲ್ಲದಿದ್ದರೂ ಶೇ 6.3ರಷ್ಟು ಮತಗಳನ್ನು ಪಡೆಯಿತು. 14 ಸ್ಥಾನಗಳಲ್ಲಿ ಎಎಪಿ ಸೋಲಿಗೆ ಕಾರಣವಾಯಿತು. ಇಷ್ಟು ಸ್ಥಾನಗಳನ್ನು ಗೆದ್ದಿದ್ದರೆ ಎಎಪಿ ಬಹುಮತ ಪಡೆದುಕೊಳ್ಳುತ್ತಿತ್ತು. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದಿರುವ ಮತಗಳು ಬಿಜೆಪಿಯ ಗೆಲುವಿನ ಅಂತರಕ್ಕಿಂತ ಹೆಚ್ಚಿವೆ. ಅಂದರೆ, ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಡುವೆ ಹೊಂದಾಣಿಕೆ ಇದ್ದಿದ್ದರೆ ಎಎಪಿ ದೆಹಲಿಯಲ್ಲಿ ಸೋಲುತ್ತಿರಲಿಲ್ಲ ಎಂಬುದನ್ನು ಇದು ಸೂಚಿಸುತ್ತಿದೆ.
ಆದರೆ ಈಗ ಎಎಪಿ ಎದುರು ಅನಿಶ್ಚಿತತೆ ಮನೆ ಮಾಡಿದೆ. ಕೇಂದ್ರ ಸರ್ಕಾರವು ಈಗ ಕೇಜ್ರೀವಾಲ್ ಹಾಗೂ ಅವರ ಪಕ್ಷದ ಪ್ರಮುಖರ ಬೆನ್ನು ಬಿಡುವ ಸೂಚನೆಗಳಿಲ್ಲ.ಎಎಪಿಯ ಹೋಳಾಗುವ ಅಪಾಯ ಇದೆ. ದೆಹಲಿಯ ಫಲಿತಾಂಶವು ಎಎಪಿ ನೇತೃತ್ವದ ಪಂಜಾಬ್ ಸರ್ಕಾರದ ಮೇಲೆ ಯಾವ ಬಗೆಯ ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಗಮನಿಸಬೇಕಿದೆ.

Leave a Comment