ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ!

ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ!

ಮೃಗಾಲಯವೊಂದರಲ್ಲಿ ನೀವೇ ಮುಖ್ಯ ಅತಿಥಿ. ಕೈಬೋನಿನ ಹಿಂದಿರುವ ಮುಖ್ಯ ಆಕರ್ಷಣೆಯೂ ನೀವೇ! ಅಪರಿಚಿತ ಗುಂಪುಗಳು ನಿಮ್ಮನ್ನೇ ದಿಟ್ಟಿಸುತ್ತ, ಗೇಲಿ ಮಾಡುತ್ತ, ನಿಮ್ಮ ಅಸ್ತಿತ್ವವನ್ನೇ ಟೀಕಿಸುತ್ತ, ಕಾಡೊಂದರಲ್ಲಿ ಸಿಕ್ಕ ವಿಲಕ್ಷಣ ಪ್ರಾಣಿಯಂತೆ ನಿಮ್ಮೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ. ಇದು ಕಟ್ಟುಕಥೆಯಲ್ಲಿ, ಇದು ಫ್ರಾನ್ಸಿನ ಅರಣ್ಯ ಪ್ರದೇಶದಲ್ಲಿ ಹುದುಗಿರುವ ಒಂದು ಕರಾಳ ರಹಸ್ಯ, ನಮ್ಮೆಲ್ಲ ವಿಕೃತಗಳನ್ನು ಇಂಚಿಂಚಾಗಿ ನಿಮ್ಮ ಮುಂದೆ ತೆರೆದಿಡುವ ಇತಿಹಾಸದ ಭಯಾನಕ ಪುಟ.

19ನೇ ಶತಮಾನದ ಉತ್ತರಾರ್ಧದಲ್ಲಿ ಹೊಸಜಾಗಗಳನ್ನು ಹುಡುಕುತ್ತಿದ್ದ ವಸಾಹತುಶಾಹಿ ಶೋಷಕರು, ಅನ್ವೇಷಕರು ಕಂಡು ವಿವರಿಸಿದ ಈ ‘ಅನಾಗರಿಕ’, ‘ಬರ್ಬರ’, “ವಿಚಿತ್ರ” ಜನರನ್ನು ನೋಡಲು ಪಾಶ್ಚಿಮಾತ್ಯ ಜಗತ್ತು ಹತಾಶೆಗೊಂಡಂತಿತ್ತು. ಈ ಉನ್ಮಾದವನ್ನು ಪೋಷಿಸಲು ಆಫ್ರಿಕಾ, ಏಷ್ಯಾ ಮತ್ತು ಅಮೆರಿಕ ಖಂಡಗಳಿಂದ ಸಾವಿರಾರು ಸ್ಥಳೀಯ ವ್ಯಕ್ತಿಗಳನ್ನು ಸಂಯುಕ್ತ ಸಂಸ್ಥಾನ ಮತ್ತು ಯುರೋಪಿಗೆ ಸಂಶಯಾಸ್ಪದ ಕರೆತಂದು ರೀತಿಯಲ್ಲಿ ‘ಮಾನವ ಮೃಗಾಲಯಗಳಲ್ಲಿ’ (ಹ್ಯೂಮನ್ ಝೂ) ಅರೆ-ಬಂಧಿತ ಸ್ಥಿತಿಯಲ್ಲಿ ಪ್ರದರ್ಶನಕ್ಕೆ ಇಡಲಾಯಿತು.

ಇಂಥ ‘ಹ್ಯೂಮನ್ ಝೂ’ಗಳು ಪ್ಯಾರಿಸ್, ಹ್ಯಾಂಬರ್ಗ್. ಬಾರ್ಸಿಲೋನಾ, ಲಂಡನ್, ಮಿಲನ್ ಮತ್ತು ನ್ಯೂಯಾರ್ಕ್ ನಗರಗಳಲ್ಲಿದ್ದವು. 1874ರಲ್ಲಿ ಕಾರ್ಲ್ ಹ್ಯಾಗೆನಕ ಎಂಬುವ ಪ್ರಾಣಿ ವ್ಯಾಪಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ದೊಡ್ಡಮಟ್ಟದಲ್ಲಿ ‘ಜನಾಂಗೀಯ ಪ್ರದರ್ಶನ’ವೆಂದು ಮರು ನಾಮಕಾರಣ ಮಾಡಿದ. ಸಾಮಾನ್ಯವಾಗಿ ವಸಾಹತುಶಾಹಿ ಪ್ರದೇಶಗಳಿಂದ ಅಥವಾ ಯುರೋಪ್ ಅಲ್ಲದ ದೇಶಗಳಿಂದ ಬಂದ ಈ ‘ವಿದೇಶಿಯರು’ ಪ್ರದರ್ಶನದ ವಸ್ತುವಾಗಿದ್ದರು. ದೂರದರ್ಶನ ಅಥವಾ ಬಣ್ಣದ ಛಾಯಾಗ್ರಹಣ ಲಭ್ಯವೇ ಇಲ್ಲದ ಕಾಲಘಟ್ಟದಲ್ಲಿ ಇವರನ್ನು ನೋಡುವುದಕ್ಕಿದ್ದ ಏಕೈಕ ಮಾರ್ಗವೇ ಜನರಿಗೆ ಇದಾಗಿತ್ತು.

ಸೌತ್ ಆಫ್ರಿಕಾದ ‘ಹೊಟ್ಟೆನ್ಸಾಟ್ ವೀನಸ್’, ಪರಿಸಿಯನ್ ವರ್ಲ್ಡ್ ಫೇನರ್‌ನ ‘ನಿಗೋ ಹಳ್ಳಿ’, ‘ಬ್ರಾಡ್‌ ಫೋರ್ಡ್ ವರ್ಡ್ ಫೇರ್’ ಹೀಗೆ ಪ್ರಪಂಚಾದ್ಯಂತ ಹತ್ತು ಹಲವು ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಇಂಥದ್ದೊಂದು ‘ಹ್ಯೂಮನ್ ಝೂ’ನ ಭಾಗವಾಗಿದ್ದ ಥಿಯೋಡೋರ್

ವನ್ಯಾ ಮಿಚಾಯೆಲ್ ಎಂಬಾತ, ಅಪರಿಚಿತರು ತನ್ನ ಸುರುಳಿಯಾಕಾರದ ಕೂದಲನ್ನು ಸವರುತ್ತ, ದೇಹವನ್ನು ಮೂಸಿ ನೋಡುತ್ತಾ, ತನ್ನ ಇರುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದನ್ನು ಸಂದರ್ಶನವೊಂದರಲ್ಲಿ ನೆನೆಯುತ್ತಾನೆ. ರಾಕ್ ಬ್ಯಾಂಡ್‌ಗಳಂತೆ ಊರಿಂದ ಊರಿಗೆ ಸುತ್ತುತ್ತ, ಪ್ರತಿ ಬಾರಿಯೂ ಪ್ರದರ್ಶಕರು ಹೇಳಿದಂತೆ ‘ಬೆಂಕಿಯ ಸುತ್ತ ಕುಣಿಯುತ್ತ, ವಿಚಿತ್ರ ಶಬ್ದಗಳನ್ನು ಮಾಡುತ್ತ’ ಆಫ್ರಿಕನ್ ಜೀವನ ಶೈಲಿ ಎನ್ನುವಂತೆ ನಟಿಸಬೇಕಾಗಿದ್ದ ಅನಿವಾರ್ಯತೆಯನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುತ್ತಾನೆ. ಥಿಯೋಡೋರ್ ವನ್ಯಾ ಮಿಚಾಯೆಲ್‌ನ ತಂದೆ 19ನೇ ಶತಮಾನದ ಕೊನೆಯಲ್ಲಿ ಕ್ಯಾಮೆ ರೂನ್‌ನಿಂದ ಯುರೋಪ್‌ ಗೆ ತಮ್ಮ ಕುಟುಂಬದೊಂದಿಗೆ ಸ್ಥಳಾಂತರ ಗೊಂಡವರು. ಬರ್ಲಿನ್‌ನಲ್ಲಿ ಸಾಮಾನ್ಯ ಕೆಲಸಗಳನ್ನು ಮಾಡಲು ಅವರಿಗೆ ಅನುಮತಿ ಇರಲಿಲ್ಲ. ಜೀವನ ಸಾಗಿಸಲು ಲಭ್ಯವಿದ್ದ ಏಕೈಕ ಮಾರ್ಗವೆಂದರೆ ಈ ಮಾನವ ಮೃಗಾಲಯಗಳೇ ಆಗಿದ್ದವು. ಕೆಲವೊಂದು ‘ಝೂ’ಗಳಲ್ಲಿ ಈ ವಿದೇಶಿಯರನ್ನು ಬೆತ್ತಲಾಗಿಸಿ ತಾಯ್ಯಾಡಿನ ಭೂದೃಶ್ಯವನ್ನು ತಕ್ಕಮಟ್ಟಿಗೆ ಮರುಸೃಷ್ಟಿಸಿ ನೈಜವೆಂಬಂತೆ ಪ್ರದರ್ಶನಕ್ಕೆ ಇಡಲಾಗುತ್ತಿತ್ತು. ಹಲವರು ಶೀತದಲ್ಲಿ ಹೆಪ್ಪುಗಟ್ಟಿ ಸತ್ತರೆ, ಇನ್ನೂ ಕೆಲವರು ಅವರ ಪ್ರದೇಶಗಳಲ್ಲಿ ಕಂಡೇ ಇರದ ಪ್ರದರ್ಶಕರ ದೇಶದ ಕಾಯಿಲೆಗಳಿಗೆ ತುತ್ತಾದರು.

ಇದನ್ನೂ ಓದಿ:ಮಕ್ಕಳಿರಲವಾ ಕಚೇರಿ ತುಂಬಾ..!

ಮೃಗಾಲಯದ ಪ್ರದರ್ಶನಗಳ ಜತೆಗೆ, ಸಂದರ್ಶಕರು ಒಂದು ಫ್ರಾಂಕ್‌ಗೆ ‘ಮಾಹಿತಿ ಮಾರ್ಗದರ್ಶಿ’ಯನ್ನು ಖರೀದಿಸಬಹುದಾಗಿತ್ತು. ಅದರಲ್ಲಿ ಪ್ರದರ್ಶನಗಳಲ್ಲಿರುವ ಮನುಷ್ಯರನ್ನು ಪ್ರಾಣಿಗಳನ್ನು ವರ್ಣಿಸುವ ರೀತಿಯಲ್ಲಿ ವರ್ಣಿಸಿದ್ದರು. ಅವರ ಎತ್ತರ ಬಣ್ಣ ಅಂಗಾಂಗಗಳ ಗಾತ್ರ ಹೀಗೆ… ಪ್ರದರ್ಶನಕ್ಕಿಟ್ಟ ಸೊಮಾಲಿ ಜನರನ್ನು ‘ಕೆಂಪು, ಕಂದು, ಗಾಢ ಕಪ್ಪು’, ‘ದೇಹಗಳು ಸೊಗಸಾಗಿವೆ’ ಎಂದು ಹೇಳುವುದರ ಜತೆಗೆ ಇವರೆಲ್ಲನಿರಂತರವಾಗಿ ಹೋರಾಡುವ, ಕದಿಯುವ, ಲೂಟಿ ಮಾಡುವ, ಯಾವುದೇ ಬಗೆಯ ಪಶ್ಚಾತ್ತಾಪವಿಲ್ಲದೆ ಕೊಲೆಗೈಯ್ಯುವ ‘ಜನಾಂಗ’ ಎಂದು ವಿವರಣೆ ನೀಡಿದ್ದರು. ಬೇಟೆಗಾರರಾಗಿ ಮಾತ್ರ ಬದುಕಲು ಲಾಯಕ್ಕಿರುವ, ಪ್ರಗತಿ ಹೊಂದಲು ಯೋಗ್ಯವಲ್ಲದ ‘ಪ್ರಾಚೀನ’ ಜನರು ಎಂದೂ ಬರೆಯಲಾಗಿತ್ತು. ಆಫ್ರಿಕನ್ನರನ್ನ ರಂತೂ ರಕ್ತಪಿಪಾಸುಗಳಂತೆ, ಅನಾಗರಿಕರಂತೆ ಬಿಂಬಿಸಲಾಗಿತ್ತು.

19ನೇ ಮತ್ತು 20ನೇ ಶತಮಾನಗಳಲ್ಲಿ ವಿಭಿನ್ನ ಜನರ ಮತ್ತು ಸಂಸ್ಕೃತಿಗಳ ಅಧ್ಯಯನವಾದ ಜನಾಂಗಶಾಸ್ತ್ರವು ‘ಫ್ಯಾಶನ್ ವಿಜ್ಞಾನ’ವಾಗಿ ಕಂಡುಬಂದಿತು! ಈ ‘ವಿಭಿನ್ನ’ ಜನರನ್ನು ನಿಗ್ರಹಿಸುವ ಸಲುವಾಗಿ ಅವರನ್ನು ‘ಕ್ರೂರ’ ಜನಾಂಗವೆಂದು ವರ್ಗೀಕರಿಸಿಲಾಯಿತು. ಗುಲಾಮಗಿರಿ, ಸ್ಥಳೀಯ ಜನರ ನರಮೇಧ ಮತ್ತು ವಸಾಹತುಶಾಹಿಯನ್ನು ಸಮರ್ಥಿಸಲು ಬಳಸುವ ಸುಲಭವಾದ ಮಾರ್ಗವಾಗಿ ಈ ಜನಾಂಗಶಾಸ್ತ್ರ ಹೊರಹೊಮ್ಮಿತ್ತು. ವಸಾಹತುಶಾಹಿ ದೇಶಗಳಲ್ಲಿನ ಸ್ಥಳೀಯ ಜನರು ಅಮಾನವೀಯರು ಎಂದು ನಿರ್ಧರಿಸುವ ಮೂಲಕ, ಬಿಳಿಯ ವಸಾಹತುಶಾಹಿಗಳು ಆತ್ಮಸಾಕ್ಷಿಗೆ ಧಕ್ಕೆ ತಂದುಕೊಳ್ಳದೆಯೇ ತಮಗೆ ಬೇಕಾದಂತೆ ಸಂಪನ್ಮೂಲಗಳ ಮೇಲೆ ಅತ್ಯಾಚಾರ ಮಾಡುತ್ತ, ಬೇಡದವರನ್ನು ಕೊಲ್ಲುತ್ತ, ಲೂಟಿ ಮಾಡಬಹುದಿತ್ತು. ಏಕೆಂದರೆ, ಅವರು ವ್ಯವಹರಿಸುತ್ತಿದ್ದುದು ಮನುಷ್ಯರೊಂದಿಗೆ ಅಲ್ಲ ಅನಾಗರಿಕರೊಂದಿಗೆ!

2013ರಲ್ಲಿ ವಿಯೆನ್ನಾ ಮೂಲದ ಪ್ರದರ್ಶನ ತಂಡವಾದ ‘ಗಾಡ್ಸ್ ಎಂಟರ್‌ಟೈನ್ಮೆಂಟ್’ ನಿರಾಶ್ರಿತ ಜನರನ್ನು, ಮಾಜಿ ಅಪರಾಧಿಗಳನ್ನು, ಒಂಟಿ ತಾಯಂದಿರನ್ನು ಪಂಜರದಲ್ಲಿ ಬಂಧಿಸಿ ಹ್ಯಾಂಬರ್ಗ್‌ನ ಕ್ಯಾಂಪ್‌ನಗಲ್ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಟ್ಟರು. ಇನ್ನೂ ಅಸ್ತಿತ್ವದಲ್ಲಿರುವ ಸಾಮಾಜಿಕ ಸ್ಟೀರಿಯೊಟೈಪ್‌ಗಳ ವಿರುದ್ಧವಾಗಿ, ಸಮಾಜ ದಿಂದ ತಿರಸ್ಕರಿಸಲ್ಪಟ್ಟ ಅಥವಾ ಯಾರಿಗೂ ಬೇಡವಾದ ಈ ‘ಅರ್ಬನ್’ ಜನರನ್ನು ಪ್ರದರ್ಶಿಸಲಾಯಿತು. ಈ ಪ್ರದರ್ಶನ ವನ್ನು ಅಮಾನುಷವೆಂದು ಸ್ಥಳೀಯರೆಲ್ಲರೂ ಭಾವಿಸಿದರು.

ಮೃಗಾಲಯಗಳಲ್ಲಿ ಪ್ರದರ್ಶನಕ್ಕಿದ್ದ ಜನರು ತಮ್ಮ ಬೇರುಗಳನ್ನು, ಅಸ್ತಿತ್ವವನ್ನು, ಭಾಷೆಯನ್ನು ಸಂಸ್ಕೃತಿಯನ್ನು, ಘನತೆಯನ್ನು ಕಳೆದುಕೊಂಡು ಅನಾಥವಾಗಿ ಸತ್ತರು. ಸತ್ತ ನಂತರವೂ ಅವರ ದೇಶಗಳು ಹಲವಾರು ದಶಕಗಳವರೆಗೆ ವಸಾಹತುಶಾಹಿಯಾಗಿ ಮುಂದುವರಿದವು ಎನ್ನುವುದು ದುರಂತ.

ಇತಿಹಾಸದ ಇಂಥ ಆಘಾತಕಾರಿ ಶೋಷಣೆಯ ಘಟ್ಟ ಮುಗಿದಿದೆ ಎಂಬ ನಿಟ್ಟುಸಿರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ. ದಿನನಿತ್ಯದ ಬದುಕಲ್ಲಿ ಬೀದಿಗಳಲ್ಲಿ ಭಾಷಣಗಳಲ್ಲಿ ಮಾತಿನಲ್ಲಿ ಪಂಜರಗಳನ್ನು ಸೃಷ್ಟಿಸಿ ಅಸಹಾಯಕರನ್ನು ಬಂಧಿ ಸುತ್ತಲೇ ಇದ್ದೇವೆ ಎನ್ನುವುದಂತೂ ಕಟು ವಾಸ್ತವ.

Leave a Comment