ಜನಗಣತಿಗೆ ಬಜೆಟ್ನಲ್ಲಿ ಅಲ್ಪ ಮೊತ್ತ ಅನುಮಾನ ಮೂಡಿಸಿದ ಕೇಂದ್ರದ ನಡೆ
ರಾಷ್ಟ್ರ ಮಟ್ಟದಲ್ಲಿ ಜನಗಣತಿ ನಡೆಸುವ ವಿಚಾರದಲ್ಲಿನ ಅನಿಶ್ಚಿತತೆ ಮುಂದುವರಿದಿದೆ. ಇದು, ಒಂದಿಷ್ಟು ಕಳವಳವನ್ನು ಹಾಗೂ ಸರ್ಕಾರವು ಜನಗಣತಿಯನ್ನು ನಡೆಸುವ ಇರಾದೆಯನ್ನು ನಿಜಕ್ಕೂ ಹೊಂದಿದೆಯೇ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಈಗಾಗಲೇ ತಡವಾಗಿರುವ ಜನಗಣತಿಯನ್ನು 2025ರಲ್ಲಿ ನಡೆಸಲಾಗುತ್ತದೆ ಹಾಗೂ ಈ ವರ್ಷವನ್ನು ಮೂಲವಾಗಿ ಇರಿಸಿಕೊಂಡು ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಈಗ ಸಂಸತ್ತಿನಲಿ ಮಂಡನೆಯಾಗಿರುವ 2025-26ನೇ ಸಾಲಿನ ಬಜೆಟ್ ನಲ್ಲಿ ಜನಗಣತಿಗಾಗಿ574.
80 ಕೋಟಿ ಮೊತ್ತವನ್ನು ಮಾತ್ರ ತೆಗೆದಿಡಿಸಲಾಗಿದೆ ಜನಗಣತಿ ಕುರಿತು ತನ್ನ ಆಲೋಚನೆಗಳ ಬಗ್ಗೆ ಕೇಂದ್ರ ಸರ್ಕಾರವು ಏನನ್ನೂ ಇದುವರೆಗೆ ಹೇಳಿಲ್ಲ. ರಾಜ್ಯಸಭೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಜನಗಣತಿ ನಡೆಸುವಲ್ಲಿ ಆಗಿರುವ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜನಗಣತಿಯು ನಡೆಯದೇ ಇದ್ದರೆ ಅಂದಾಜು 14 ಕೋಟಿ ಜನರಿಗೆ ಆಹಾರ ಭದ್ರತೆಯನ್ನು ನಿರಾಕರಿಸಿದಂತೆ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಜನಗಣತಿ ಮೂಲಕ ಸಿಗುವ ಅಂಕಿ ಅಂಶವನ್ನು ಆಧರಿಸಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಫಲಾನುಭವಿಗಳನ್ನು ಲೆಕ್ಕಹಾಕಲಾಗುತ್ತದೆ. ಆದರೆ, ಜನಗಣತಿಯ ಅಂಕಿ-ಅಂಶಗಳು ಇಲ್ಲದಿದ್ದಾಗ ಈ ಕಾಯ್ದೆಯ ಅಡಿಯಲ್ಲಿ ಸಿಗುವ ಪ್ರಯೋಜನಗಳು ದೊಡ್ಡ ಸಂಖ್ಯೆಯ ಜನರಿಗೆ ಇಲ್ಲದಂತೆ ಆಗುತ್ತವೆ.
ದೇಶದ ಜನಸಂಖ್ಯೆಯನ್ನು ಲೆಕ್ಕಹಾಕುವ ಅತಿದೊಡ್ಡ ಹಾಗೂ ಅತ್ಯಂತ ಸಮಗ್ರವಾದ ಕಾರ್ಯಕ್ರಮ ಜನಗಣತಿ, ದೇಶದ ಜನಸಂಖ್ಯೆ ಎಷ್ಟು ಎಂಬುದನ್ನು ತಿಳಿಸುವುದಷ್ಟೇ ಅಲ್ಲದೆ, ಇದು ಸಮಾಜ ಹಾಗೂ ಆರ್ಥಿಕತೆಯ ಬಗ್ಗೆ ಮಾಹಿತಿ ಒದಗಿಸುತ್ತದೆ, ದೇಶದ ಹಲವು ಕ್ಷೇತ್ರಗಳಲ್ಲಿ ಆಗಿರುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಕಡೆಯ ಬಾರಿಗೆ ಜನಗಣತಿ ನಡೆದಿದ್ದು 2011ರಲ್ಲಿ. ಆ ನಂತರದಲ್ಲಿ ದೇಶವು ಹಲವು ಬದಲಾವಣೆಗಳನ್ನು ಕಂಡಿದೆ. 2011ರಲ್ಲಿ ದೇಶದ ಜನಸಂಖ್ಯೆಯು 121 ಕೋಟಿ ಆಗಿತ್ತು. ಅದು ಈಗ 145 ಕೋಟಿ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. 2021ರಲ್ಲಿ ನಡೆಯ ಬೇಕಿದ್ದ ಜನಗಣತಿಯನ್ನು ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಮುಂದೂಡಲಾಯಿತು. ಆ ಸಂದರ್ಭದಲ್ಲಿ ಜಗತ್ತಿನ ಇತರ ಹಲವು ದೇಶಗಳು ಕೂಡ ತಮ್ಮಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಮುಂದುಡಿತವು. ಆದರೆ ಆ ಪೈಕಿ ಒಂದಿಷ್ಟು ದೇಶಗಳು ನಂತರದಲ್ಲಿ ಜನಗಣತಿ ಕಾರ್ಯ ನಡೆಸಿವೆ. ಆದರೆ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತವು ಇನ್ನೆಷ್ಟು ಜನಗಣತಿ ನಡೆಸಬೇಕಿದೆ.
ಇದನ್ನೂ ಓದಿ:ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ!
ಜನಸಂಖ್ಯೆಯ ನಿಖರ ಲೆಕ್ಕ ಇಲ್ಲದೇ ಇದ್ದಾಗ ನೀತಿ ನಿರೂಪಣೆಯ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಸರ್ಕಾರಗಳು ಸಂಪನ್ಮೂಲ ಹಂಚಿಕೆ ಮಾಡುವಾಗ ಕೂಡ ಸಮಸ್ಯೆಗಳು ಸೃಷ್ಟಿಯಾಗು ಇವೆ. ಸಾರ್ವಜನಿಕ ನೀತಿ ನಿರೂಪಣೆಯು ಪರಿಣಾಮಕಾರಿ ಆಗಿರಬೇಕು ಎಂದಾದರೆ ದತ್ತಾಂಶಗಳು ನಿಖರವಾಗಿ ಇರಬೇಕು. ಆಗಮಾತ್ರ ನೀತಿಗಳನ್ನು, ಯೋಜನೆಗಳನ್ನು ಸೂಕ್ತವಾಗಿ ರೂಪಿಸಲು ಹಾಗೂ ಅರ್ಹ ಫಲಾನುಭವಿಗಳಿಗೆ ಅವು ಸಿಗುವಂತೆ ಮಾಡಲು ಸಾಧ್ಯವಾಗುತ್ತದೆ. ನೀತಿ ನಿರೂಪಣೆಯಲ್ಲಿ ನೆರವಾಗುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ, ಕಾರ್ಮಿಕರ ಸಮೀಕ್ಷೆ, ಮಾದರಿ ನೋಂದಣಿ ವ್ಯವಸ್ಥೆ, ಕುಟುಂಬಗಳ ಮಟ್ಟದಲ್ಲಿನ ಖರೀದಿ ಕುರಿತ ಸಮೀಕ್ಷೆಯು ಜನಗಣತಿಯ ದತ್ತಾಂಶವನ್ನು ಆಧರಿಸಿರುತ್ತವೆ.
ದೇಶದಲ್ಲಿ ವಲಸೆ ಹೆಚ್ಚಾಗಿ, 2011ರ ನಂತರದಲ್ಲಿ ದೇಶದ ಜನಸಂಖ್ಯಾ ಸ್ವರೂಪವು ಬಹಳಷ್ಟು ಬದಲಾವಣೆಗಳನ್ನು ಕಂಡಿದೆ. ನಗರೀಕರಣ ಹೆಚ್ಚಾದಂತೆ, ಜನರ ಜೀವನಶೈಲಿಯಲ್ಲಿ ಬದಲಾವಣೆ ಆದಂತೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ವರೂಪದಲ್ಲಿಯೂ ಬದಲಾವಣೆಗಳು ಆಗಿವೆ. ಇದೇ ರೀತಿಯಲ್ಲಿ ರಾಜ್ಯಗಳ ಮಟ್ಟದಲ್ಲಿಯೂ ಬದಲಾವಣೆಗಳು ಆಗಿವೆ. ಆ ಬದಲಾವಣೆಗಳನ್ನು ಸ್ಪಷ್ಟವಾಗಿ ಗುರುತಿಸಿ, ಜನಕಲ್ಯಾಣ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ರೂಪಿಸಲು ಜನಗಣತಿಯ ಅಂಕಿ-ಅಂಶ ಬೇಕೇ ಬೇಕು. ಕೇಂದ್ರ ಸರ್ಕಾರವು ಜನಗಣತಿಗೆ ಸಂಬಂಧಿಸಿದ ಕಳವಳ ನಿವಾರಿಸುವ ಮತ್ತು ಪ್ರಶ್ನೆಗಳಿಗೆ ಉತ್ತರಿಸುವ ಕೆಲಸವನ್ನು ಮಾಡಬೇಕು.