ಜಗತ್ತು ಮೀನಿನ ಬಲೆಯಂತಾದರೆ ಜೀವ ಮೀನಿನಂತೆ!

ಜಗತ್ತು ಮೀನಿನ ಬಲೆಯಂತಾದರೆ ಜೀವ ಮೀನಿನಂತೆ!

ಜೀವನವನ್ನು ಅದರಲ್ಲಿಯೂ ಆಧ್ಯಾತ್ಮಿಕ ಜೀವನವನ್ನು ,ಸಾಧನಾ ಪಥವನ್ನು ಆಯ್ಕೆ ಮಾಡಿಕೊಳ್ಳುವವರು, ಮೊದಲು ತಮ್ಮ ಸ್ಥಿತಿ ಹಾಗೂ ಯಾವ ವರ್ಗಕ್ಕೆ ಸೇರಿದ್ದೇವೆ ಎಂಬುದನ್ನು ಖಚಿತಗೊಳಿಸಿಕೊಳ್ಳಬೇಕು. ತದನಂತರ ಸಾಧನಾ ಮಾರ್ಗದಲ್ಲಿ ಪಥಿಸಲು ಸುಲಭ. ಹೇಗೆ ಸಾಮಾನ್ಯ ಜೀವನದಲ್ಲಿ ದೇಹಕ್ಕೆ ಸ್ವಲ್ಪ ಆಲಸ್ಯ, ಹುಷಾರು ತಪ್ಪುವಂತಾದಾಗ ವೈದ್ಯರ ಬಳಿ ತೆರಳಿ ಏನಾಗಿದೆ ಎಂಬುದನ್ನು ಮೊದಲು ಅರಿತು ತದನಂತರ ಔಷಧೋಪಚಾರಗಳನ್ನು ಪಡೆಯುವ ಮಾರ್ಗವನ್ನು ಅನುಸರಿಸುತ್ತೇವೆಯೋ ಹಾಗೆಯೇ ಸಾಧನಾ ಪಥದಲ್ಲಿ ಮೊದಲು ನಾವೇನಾಗಿದ್ದೇವೆ? ನಾಲ್ಕು ವರ್ಗಗಳಲ್ಲಿ ಯಾವ ವರ್ಗಕ್ಕೆ ಸೇರಿರುವೆ ಎಂಬುದನ್ನು ಪೂರ್ಣವಾಗಿ ಅರ್ಥೈಸಿಕೊಂಡು ಸಾಧನಾ ಪಥಕ್ಕೆ ಧುಮಕಬೇಕು.

ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಪರಮಗುರುಗಳಾಗಿದ್ದರು. ಯಾವ ಸಾಧಕನಿಗೆ ಯಾವ ಮಾರ್ಗ ಉತ್ತಮ ಎಂಬುದನ್ನು ಖಚಿತಪಡಿಸಿಕೊಂಡು ತದನಂತರ ಮಾರ್ಗದರ್ಶನ ನೀಡುತ್ತಿದ್ದರು. ಉದಾಹರಣೆಗೆ ನರೇಂದ್ರನಾಥ ದತ್ತನಿಗೆ (ಸ್ವಾಮಿ ವಿವೇಕಾನಂದ) ಧ್ಯಾನಯೋಗ ಮಾರ್ಗವನ್ನು ಮೊದಲೇ ನಿರ್ಧರಿಸಿದ್ದರು. ಅದರಂತೆಯೇ ನರೇಂದ್ರನಿಗೆ ಧ್ಯಾನಯೋಗಿಗೆ ಬೇಕಾಗಿರುವಂತಹ ಮಾರ್ಗಸೂಚಿಯನ್ನು ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ಯುವ ಕಾಲಿಪ್ರಸಾದಚಂದ್ರ (ಸ್ವಾಮಿ ಅಭೇದಾನಂದಜೀ) ಅವರಿಗೆ ಯೋಗಿಯಮಾರ್ಗದರ್ಶನ ನೀಡುತ್ತಾ ಮಹಾನ್ ಯೋಗಸ್ಥನಾಗಿ ಸೂಚಿಸಿದರು. ಅವರ ಪ್ರಕಾರ ಜೀವರಲ್ಲಿ ಕ ನಾಲ್ಕು ವರ್ಗದವರಿದ್ದಾರೆ ಎಂಬುದಾಗಿ ಶಾಸ್ತ್ರದಲ್ಲಿ ಹೇಳಿದೆ – ಬದ್ಧ, ಮುಮುಕ್ಷು, ಮುಕ್ತ, ನಿತ್ಯ.

ಹೀಗೆ ವಿವರಿಸುತ್ತಾ ಅವರೊಂದು ಉದಾಹರಣೆ ನೀಡುತ್ತಾರೆ: ಈ ಜಗತ್ತು ಮೀನುಬಲೆಯಿದ್ದ ಹಾಗೆ. ಜೀವ ಮೀನು ಇದ್ದ ಹಾಗೆ. ಯಾರ ಮಾಯೆಯಿಂದ ಈ ಜಗತ್ತು ಸೃಷ್ಟಿಯಾಗಿದೆಯೋ ಆ ಭಗವಂತ ಬೆಸ್ತ ಇದ್ದ ಹಾಗೆ. ಬೆಸ್ತನ ಬಲೆಗೆ ಮೀನು ಬಿದ್ದಾಗ ಕೆಲವು ಮೀನುಗಳು ಬಲೆಯನ್ನು ಕತ್ತರಿಸಿ ಓಡಿ ಹೋಗಲು, ಅಂದರೆ ಬಂಧನದಿಂದ ಪಾರಾಗಲು ಯತ್ನಿಸುತ್ತವೆ. ಇವನ್ನೇ ಮುಮುಕ್ಷು ಜೀವಕ್ಕೆ `ಹೋಲಿಸಬಹುದು. ಬಂಧನದಿಂದ ಪಾರಾಗಲು ಯತ್ನಿಸಿದ ಮೀನುಗಳಲ್ಲಿ ಎಲ್ಲವೂ ಪಾರಾಗಲಾರವು. ಎಲ್ಲೋ ಮೂರೋ ನಾಲ್ಲೋ ಮೀನು ಡುಬಕ್ ಅಂತ ಶಬ್ದ ಮಾಡಿ ಓಡಿಹೋಗುತ್ತವೆ. ಆಗ ಅಲ್ಲಿಯ ಬೆಸ್ತರು ಹೇಳುತ್ತಾರೆ; ಓ, ಅಲ್ಲಿ ಒಂದು ಬಹಳ ದೊಡ್ಡದು ಓಡಿಹೋಗುತ್ತಿದೆ! ಈ ಮೂರೋ ನಾಲ್ಕು ಮೀನುಗಳನ್ನು ಮುಕ್ತ ಜೀವರಿಗೆ ಹೋಲಿಸಬಹುದು. ಕೆಲವು ಮೀನುಗಳನ್ನು ಸ್ವಾಭಾವಿಕವಾಗಿಯೇ ಅಷ್ಟು ಎಚ್ಚರಿಕೆಯುಳ್ಳವು; ಆದರೂ ಅವಕ್ಕೆ ತಾವು ಬಲೆಗೆ ಬಿದ್ದಿರುವ ಮತ್ತು ಒಡನೆ ಸಾಯಬೇಕಾಗಿರುವುದರ ಪ್ರಜ್ಞೆಯೇ ಇರುವುದಿಲ್ಲ. ಬಲೆಗೆ ಬಿದ್ದೊಡನೆಯೇ ಅವು ನೇರವಾಗಿ ಬಲೆಯೊಡನೆ ಹೋಗಿ ಕೆಸರನ್ನು ಹೊಕ್ಕು ತಮ್ಮನ್ನು ಮಾಡುತ್ತವೆಯೇ ವಿನಃಬಂಧನದಿಂದ ಪಾರಾಗಲು ಸ್ವಲ್ಪವೂ ಪ್ರಯತ್ನ ಮಾಡುವುದಿಲ್ಲ. ಅದಕ್ಕೆ ಬದಲಾಗಿ ಕೆಸರಿನಲ್ಲಿ, ಬದಿಯಲ್ಲಿ ಇನ್ನೂ ಆಳಕ್ಕೆ ಹೋಗುತ್ತೆ ತಾವು ಸುರಕ್ಷಿತ ಎಂದು ಭಾವಿಸುತ್ತವೆ.

ಇದನ್ನೂ ಓದಿ:ಹೂಡಿಕೆಗೆ ಪೂರಕವಾದ ನೀತಿ

ಇವನ್ನೇ ಬದ್ಧ ಜೀವರಿಗೆ ಹೋಲಿಸಬಹುದು. ಮುಮುಕ್ಷುಗಳಿಗೆ ಮತ್ತು ಮುಕ್ತರಿಗೆ ಈ ಜಗತ್ತು ಆಳವಾದ ದೊಡ್ಡ ಬಾವಿಯ ಹಾಗೆ ಕಾಣುತ್ತದೆ. ಅದಕ್ಕಾಗಿಯೇ ಕೆಲವರು ಬ್ರಹ್ಮ ಜ್ಞಾನ, ಭಗವಂತನ ಸಾಕ್ಷಾತ್ಕಾರ ದೊರೆತ ನಂತರ ಶರೀರವನ್ನು ತ್ಯಜಿಸಿಬಿಡುತ್ತಾರೆ. ರಾಮಕೃಷ್ಣ ಪರಮಹಂಸರು ಈ ತೆರನಾದ ನಾಲ್ಕು ದರ್ಜೆಯ ಮನುಜರನ್ನು ವಿವರಿಸುತ್ತಾರೆ. ಹಾಗೆಯೇ ಮತ್ತೊಂದು ಉದಾಹರಣೆಯ ಮೂಲಕ ಈ ಸಂಸಾರ ಚಕ್ರದಲ್ಲಿ ಸಿಲುಕಿರುವ ಬದ್ಧ ಜೀವರ ಸ್ಥಿತಿಯನ್ನು ತಿಳಿಸುತ್ತಾರೆ. ಒಂಟೆಗೆ ನೆಗ್ಗಲು ಮುಳ್ಳು ಕಂಡರೆಬಹಳ ಪ್ರೀತಿಯಂತೆ. ಅದನ್ನು ಅಧಿಕವಾಗಿ ತಿಂದಂತೆಲ್ಲಾ ಅದರ ಬಾಯಿಂದ ರಕ್ತ ಹರಿಯಲಾರಂಭಿಸುತ್ತದೆ. ಅದರೂ ಆ ಒಂಟೆಗೆ ಮುಳ್ಳೇ ಬೇಕು ಮತ್ತು ಅದನ್ನು ತಿನ್ನುವುದನ್ನು ಎಂದಿಗೂ ಬಿಡುವುದಿಲ್ಲ. ಹೀಗೆಯೇ ಸಂಸಾರಿಗಳು ಬಹಳ ಶೋಕ, ತಾಪ ಹಾಗೂ ಸಂಕಷ್ಟಗಳಿಂದ ಬೆಂದು ಬೆಂಡಾಗುತ್ತಾರೆ. ಅದರೂ ಇವೆಲ್ಲವನ್ನು ಕ್ಷಣಾರ್ಧದಲ್ಲಿ ಮರೆತು ಎಂದಿನಂತೆ ತಮ್ಮ ಸಂಸಾರ ಚಕ್ರದಲ್ಲಿ ಸಿಲುಕಿ ನರಳುತ್ತಾರೆ. ಈ ರೀತಿಯ ಮನುಜರಿಗೆ ಬದ್ದರು ಎಂದು ಕರೆಯಲಾಗುತ್ತದೆ ಎಂದು ತಿಳಿಸುತ್ತಾರೆ.

ಪರಮಹಂಸರ ಪ್ರಕಾರ, ಯಾರು ಆಧ್ಯಾತ್ಮಿಕ ಜೀವನಕ್ಕೆ ಧುಮುಕಲು ಅಹರ್ನಿಶಿ ಪ್ರಯತ್ನಪಡುತ್ತಾರೋ ಅವರು ಬಲೆಗೆ ಸಿಕ್ಕಿದ ಮೀನು, ಬಲೆಯಿಂದ ಬಿಡಿಸಿಕೊಳ್ಳಲು ನಾನಾ ವಿಧವಾದ ಪ್ರಯತ್ನಪಟ್ಟು ಯಶಸ್ವಿಯಾಗಿ ಹೊರಬರುತ್ತವೋ ಅವು ಮುಮುಕ್ಷು, ಬಲೆಯ ಸನಿಹಕ್ಕೆ ಬಂದು ಛಂಗನೆ ಹಾರಿ ಪಾರಾಗುವ ವರ್ಗ ಮುಕ್ತ ಪಂಗಡಕ್ಕೆ ಸೇರುವಂಥವು. ಮತ್ತೊಂದು ಶ್ರೇಷ್ಠವಾದ ಪಂಗಡವೆಂದರೆ ಅಪ್ಪಿತಪ್ಪಿಯೂ ಬಲೆಗೆ ಸಿಲುಕದೆ ಸದಾ ನಿತ್ಯ ಮುಕ್ತರಾಗಿ ಭಗವಂತನನ್ನು ಪಡೆಯುವ ನಿತ್ಯ ಸಿದ್ದರದು.ಈಗ ನಾವು ಯಾವ ವರ್ಗದವರು ಎಂಬುದನ್ನು ಮೊದಲು ಅರ್ಥೈಸಿಕೊಂಡು ಸಾಧನಾ ಪಥದಲ್ಲಿ ಸಾಗೋಣ.

Leave a Comment