ವೆಬ್‌ಕಾಸ್ಟಿಂಗ್‌: ಅಪನಂಬಿಕೆಗೆ ಕೈಗನ್ನಡಿ

ವೆಬ್‌ಕಾಸ್ಟಿಂಗ್‌: ಅಪನಂಬಿಕೆಗೆ ಕೈಗನ್ನಡಿ

ಇದು, ಮೂರು ವರ್ಷದ ಹಿಂದಿನ ಪ್ರಕರಣ. ವಿದ್ಯಾರ್ಥಿನಿಯೊಬ್ಬಳು ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಳು.ಅ ಕೊಠಡಿಗೆ ಬಂದು ವ್ಯಕ್ತಯೊಬ್ಬರು ಅವಳಿಗೆ ಉತ್ತಮ ಹೇಳಿಕೊಡಲು ಮುಂದಾದರು. ಆಗ ಆ ಮಗು ಹೇಳಿಕೊರ. ಕೇಳಿದವರು ಬೆಕ್ಕಸ ಬೆರಗಾಗುವಂತೆ ಇತ್ತು. ನನಗೆ ನಿಮ್ಮ ಉತ್ತರದ ಅವಶ್ಯಕತೆ ಇಲ್ಲ. ನಾನು ಯಾರಿಂದಲೂ ಹೇಳಿಸಿಕೊಳ್ಳು ವುದಿಲ್ಲ ಮತ್ತು ಯಾರಿಗೂ ಹೇಳಿಕೊಡುವುದಿಲ್ಲ’. ಆ ಮಾತನ್ನು ಇಡೀ ತರಗತಿ ಕೇಳಿಸಿಕೊಂಡಿತ್ತು.

ಎಚ್.ನರಸಿಂಹಯ್ಯ ಕೇ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಯೋಗವೊಂದನ್ನು ಮಾಡಿದ್ದರು.ಮೇಲ್ವಿಚಾರಕರನ್ನು ನಿಯೋಜಿಸದೆ ಪದವಿ ಪರೀಕ್ಷೆಗಳನ್ನು ಆಯೋಜಿಸಿದ್ದರು. ಇಷ್ಟು ದಿನ ವಿದ್ಯಾರ್ಥಿಗಳು ಸತ್ಯ, ನ್ಯಾಯ, ಪ್ರಾಮಾ ಣಿಕತೆಯಂತಹ ಮೌಲ್ಯಗಳನ್ನು ತರಗತಿಗಳಲ್ಲಿ ಕಲಿತಿರು ತ್ತಾರೆ. ಆದ್ದರಿಂದ ಅವರು ಕಾಪಿ ಮಾಡದೆ ಬರೆಯಬಹುದು ಎಂದು ಯೋಚಿಸಿದ್ದರು. ಆದರೆ ಕೆಲವು ವಿದ್ಯಾರ್ಥಿಗಳು ಕಾಪಿ ಮಾಡಿ ಬರೆದಿದ್ದರು. ಕಲಿತಿದ್ದ ಮೌಲ್ಯಗಳು ಕುಸಿದುಬಿದ್ದಿದ್ದವು.

ನಾವು ಮೊದಲಿನಿಂದಲೂ ಪಬ್ಲಿಕ್ ಪರೀಕ್ಷೆ ಗಳಲ್ಲಿ ವಿದ್ಯಾರ್ಥಿಗಳನ್ನು ಕಾಯಲು ಮೇಲ್ವಿಚಾರಕ ರನ್ನಷ್ಟೇ ನೇಮಿಸುತ್ತಿದ್ದವು. ಹೋದ ವರ್ಷ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆಯ ಮೂಲಕ ಪರೀಕ್ಷೆ ನಡೆಸಲಾದ ಈ ವರ್ಷ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಕೃತಕ ಬುದ್ಧಿಮತ್ತೆಯುಳ್ಳ ಕ್ಯಾಮೆರಾಗಳನ್ನು ಅಳವಡಿಸಿ ಪರೀಕ್ಷೆ ನಡೆಸಲು ಯೋಚಿಸಲಾಗಿದೆ. ಎಲ್ಲ ಮಕ್ಕಳೂ ಕಾಪಿ ಮಾಡದೆ ಪರೀಕ್ಷೆಯನ್ನು ಎದುರಿಸಬೇಕು, ಅದೇ ಸರಿಯಾದ ಮೌಲ್ಯಮಾಪನ ಕ್ರಮ, ಮಕ್ಕಳ ನಿಖರವಾದ ಕಲಿಕೆಯನ್ನು ಇದರಿಂದ ಅಳೆಯಲು ಸಾಧ್ಯವಾಗ ಬಹುದು ಎಂದು ಶಿಕ್ಷಣ ಇಲಾಖೆ ಅಂದಾಜಿಸಿದೆ.

ನಮ್ಮ ವಿದ್ಯಾರ್ಥಿಗಳು ಕಲಿಯುತ್ತಿರುವ ಪಠ್ಯದಲ್ಲಿ ಮೌಲ್ಯಗಳ ಮಹಾಪೂರವೇ ಹರಿಯುತ್ತಿರುತ್ತದೆ. ಮೊದಲಿಗಿಂತ ಈಗ ಬಹಳಷ್ಟು ಮಹಾತ್ಮರ ಜಯಂತಿಗಳನ್ನು ಆಚರಿಸುತ್ತಿದ್ದೇವೆ. ಅವರ ಬದುಕಿನ ಪರಿಚಯವೂ ಆಗುತ್ತಿದೆ. ಇಷ್ಟಾದರೂ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಯಾಕೆ ಅಡ್ಡಮಾರ್ಗದ ಕಡೆ ಉತ್ಸುಕರಾಗಿರುತ್ತಾರೆ? ಕೆಲವು ಶಿಕ್ಷಕರೂ ಯಾಕೆ ಆ ದಿಸೆಯಲ್ಲೇ ಯೋಚಿಸುತ್ತಾರೆ?

ಇದನ್ನೂ ಓದಿ:ಸಮ್ಮೋಹಗೊಳಿಸುವ ‘ಕಿಂದರಿ’ ರಾಗ

ಮಕ್ಕಳು ಒತ್ತಡದಲ್ಲಿದ್ದಾರೆ. ಆ ಒತ್ತಡವು ಶಿಕ್ಷಕರೂ ಸೇರಿದಂತೆ ಸಮಾಜಕ್ಕೆ ಉತ್ತರ ಕೊಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಎಲ್ಲರಲ್ಲೂ ಇದೆ. ಹೆಚ್ಚು ಅಂಕ ಬಂದ ವಿದ್ಯಾರ್ಥಿ ಮಾತ್ರವೇ ಬುದ್ಧಿವಂತ, ಇಂತಹದ್ದೊಂದು ಸಾಧನೆಗೆ ಕಾರಣರಾದ ಶಿಕ್ಷಕರು ಮಾತ್ರವೇ ಉತ್ತಮ ಶಿಕ್ಷಕರು ಎಂದು ವ್ಯಾಖ್ಯಾನಿಸಲ್ಪಡು ವುದರಿಂದ ಬಹುಶಃ ಈ ಒತ್ತಡ ಸೃಷ್ಟಿಯಾಗಿದೆ. ಪರಸ್ಪರ ಪೈಪೋಟಿ ಉಂಟಾಗಿದೆ.

“ಕದಿಯುವುದು ತಪ್ಪು’ ಎನ್ನುವ ಉತ್ತರವನ್ನು ವಿದ್ಯಾರ್ಥಿ ತನ್ನ ಪಕ್ಕದವರಿಂದ ಅಥವಾ ತಾನು ಬರೆದುಕೊಂಡು ಬಂದ ಚೀಟಿಯಿಂದ ಕದ್ದು ನೋಡಿ ಬರೆಯುವುದು ಕಲಿಕೆ ಹೇಗಾಗುತ್ತದೆ? ‘ಕದಿಯುವುದು ತಪ್ಪು’ ಎನ್ನುವ ಉತ್ತರವನ್ನು ಬರೆಯಲು ಬಾರದೆ. ಪಕ್ಕದಲ್ಲಿ ಅದರ ಉತ್ತರ ಸಿಕ್ಕರು ಕದಿಯುವುದು ತಪ್ಪು ಎಂಬುದನ್ನು ಅರಿತುಕೊಂಡು ಸುಮ್ಮನೆ ಕೂತರೆ, ಅದು ತಾನೆ ನಿಜವಾದ ಕಲಿಕೆ?

ನಾವು ಎಂಟನೇ ತರಗತಿಯಲ್ಲಿ ಇದ್ದಾಗ ಶಿಕ್ಷಕರು ನಮಗೊಂದು ಕಿರು ಪರೀಕ್ಷೆ ನೀಡಿದ್ದರು. ‘ಇಲ್ಲಿ ಪಾಸು, ಫೇಲ್ಸ್ ಇರುವುದಿಲ್ಲ. ಅಂಕಗಳೂ ಇರುವುದಿಲ್ಲ. ಸರಿಯಾಗಿ ಬರೆಯದೇ ಇರುವ ಮಕ್ಕಳ ಹೆಸರನ್ನು ತರಗತಿಯಲ್ಲಿ ಹೇಳಿ ಅವಮಾನ ಮಾಡುವುದಿಲ್ಲ. ಎಷ್ಟು ಕಲಿತಿದ್ದೀರೊ ಅಷ್ಟು ಬರೆಯಿರಿ, ಉತ್ತರ ಗೊತ್ತಾಗದೇ ಹೋಗುವುದು ಅವಮಾನ ಎಂದು ಭಾವಿಸಬೇಡಿ. ತಪ್ಪಾದದ್ದನ್ನು ನಾನು ನಿಮಗೆ ಹೇಳಿಕೊಡುವೆ. ನಿಮ್ಮಷ್ಟಕ್ಕೆ ನೀವು ಪ್ರಾಮಾಣಿಕವಾಗಿ ಬರೆಯಿರಿ’ ಎಂದು ಹೇಳಿ ಪ್ರಶ್ನೆಪತ್ರಿಕೆ ಕೊಟ್ಟು ಹೋಗಿದ್ದರು. ನಾವು ಯಾರೂ ಕದ್ದು ಬರೆಯಲಿಲ್ಲ. ನಮಗೆ ಗೊತ್ತಿದ್ದುದನ್ನು ಬರೆದಿದ್ದವು. ಶಿಕ್ಷಕರಿಗೆ ಖುಷಿಯಾಗಿತ್ತು. ನಂತರ ನಾವು ಹೈಸ್ಕೂಲ್ ಮುಗಿಸುವವರೆಗೂ ಅವರು ಅದೇ ವ್ಯವಸ್ಥೆಯನ್ನು ಮುಂದುವರಿಸಿದ್ದರು.

ವೆಬ್‌ಕಾಸ್ಟಿಂಗ್ ಅಳವಡಿಸುವುದು ಹೆಗ್ಗಳಿಕೆ ಅಲ್ಲ, ಅದು ನಮ್ಮ ಸೋಲು, ನಮ್ಮ ನಡುವೆ ಒಡೆದುಹೋಗಿರುವ ನಂಬಿಕೆ. ಮಕ್ಕಳಿಗೆ ತಮ್ಮ ಬಗ್ಗೆ ತಮಗೇ ನಂಬಿಕೆಯಿಲ್ಲ. ಶಿಕ್ಷಕರು ಮಕ್ಕಳನ್ನು ನಂಬುತ್ತಿಲ್ಲ. ಶಿಕ್ಷಕರನ್ನು ಅಧಿಕಾರಿಗಳು ನಂಬುತ್ತಿಲ್ಲ. ಅಧಿಕಾರಿಗಳನ್ನು ಸಮಾಜ ನಂಬುತ್ತಿಲ್ಲ. ಇದು ನಾವೇ ಹುಟ್ಟುಹಾಕಿರುವ ಅಪನಂಬಿಕೆಯ ವ್ಯವಸ್ಥೆ. ಯಾರು ಇರಲಿ ಇಲ್ಲದೇ ಇರಲಿ ನನ್ನ ಉತ್ತರವನ್ನು ನಾನು ಬರೆಯುವೆ ಅನ್ನುವುದು ನಿಜವಾದ ಕಲಿಕೆ.

ಈಗ ನಾವು ತರಗತಿ ಕೋಣೆಗೆ ಕ್ಯಾಮೆರಾ ಹಾಕಿ ಉತ್ತರ ಬರೆಸಿಕೊಂಡು, ಕೈಯಲ್ಲೊಂದು ಪ್ರಮಾಣ ಪತ್ರವನ್ನು ಕೊಟ್ಟು, ಆಚೆ ಸಮಾಜಕ್ಕೆ ವಿದ್ಯಾರ್ಥಿಯನ್ನು ನೂಕಿಬಿಡಬಹುದು. ಅವನಲ್ಲಿ ಒಳ್ಳೆಯತನವನ್ನು ಕಾಪಿಡಲು ಮತ್ತು ದುರ್ವತ್ರನೆಗಳನ್ನು ನಿಯಂತ್ರಿಸಲು ಸಮಾಜದ ನಡುವೆ ಸದಾ ಒಂದು ಕ್ಯಾಮೆರಾದ ಕಣ್ಣಾವಲಿನಲ್ಲಿ ಅವನನ್ನು ಬಂಧಿಸಿಡಲು ಸಾಧ್ಯವೇ? ಕಲಿಕೆ ಅನ್ನುವುದು ಬದುಕಿನುದ್ದಕ್ಕೂ ಮಗುವಿನ ಕೈ ಹಿಡಿಯಬೇಕಲ್ಲವೇ?

ಕ್ಯಾಮೆರಾ ಇರಲಿ ಇಲ್ಲದೇ ಇರಲಿ, ಕಾಯಲು ಶಿಕ್ಷಕರು ಇರಲಿ ಇಲ್ಲದೇ ಇರಲಿ ತಾನು ಕಲಿತದ್ದನ್ನು ವಿದ್ಯಾರ್ಥಿ ಪ್ರಾಮಾಣಿಕವಾಗಿ ಬರೆಯುವುದು ನಿಜಕ್ಕೂ ಕಲಿಕೆಯ ಮೊದಲ ಗೆಲುವು. ಯಾವ ಅಧಿಕಾರಿ ಕೇಳಲಿ ಬಿಡಲಿ ಪ್ರಾಮಾಣಿಕವಾಗಿ ಕಲಿಸುವುದು ಶಿಕ್ಷಕರ ಮೊದಲ ಬದ್ಧತೆಯಾಗಬೇಕು. ಎಲ್ಲರೂ ಅವರವರ ಆತ್ಮಸಾಕ್ಷಿಗೆ ವಾಗಿ ಕೆಲಸ ಮಾಡುತ್ತಾ ಅನುಗುಣವಾಗಿ ಹೋದರೆ ಬದಲಾವಣೆ ಎಷ್ಟು ಹೊತ್ತಿನ ಮಾತು ?

Leave a Comment