ಆವಿಯಾದವರ ಕಥೆ ಹೇಳಲೇನು…
ಎಂದಿನಂತಿ ಅವತ್ತು ಕೂಡ ಅವನು ಕೆಲಸಕ್ಕೆ ಹೊರಟಿದ. ಎಂ.ಫಾರ್ಮಲ್ ಶರ್ಟ್ ಮತ್ತು ಟೈ ಧರಿಸಿ ಹೆಂಡತಿಗೆ ವಿದಾಯ ಹೇಳುತ್ತಾ ಕೈಯ್ಯಲ್ಲಿದ್ದ ಬೀಫ್ ಕೇಸನ್ನು ಹಿಂದಿನ ಸೀಟಿನಲ್ಲಿರಿಸಿ ಕಾರನ್ನು ಡ್ರೈವ್ ಮಾಡುತ್ತಾ ಕಚೇರಿಯತ್ತ ಹೊರಟೇಹೋದ. ರಾತ್ರಿ ಎಷ್ಟು ಹೊತ್ತಾದರೂ ಹಿಂದಿರುಗಲಿಲ್ಲ. ಕಚೇರಿಗೆ ಫೋನ್ ಮಾಡಿದಾಗಷ್ಟೇ ಅವನನ್ನು ಒಂದು ತಿಂಗಳ ಹಿಂದೆಯೇ ಕೆಲಸದಿಂದ ತೆಗೆದು ಹಾಕಿದ್ದ ಸುದ್ದಿ ಹೆಂಡತಿಗೆ ಅರಿವಾಗಿದ್ದು, ವೈಫಲ್ಯವನ್ನು ಒಪ್ಪಿಕೊಳ್ಳುವ ಬದಲು ಯಾರಿಗೂ ಒಂದು ಸುಳಿವನ್ನೂ ನೀಡದಂತೆ ಕಣ್ಮರೆಯಾಗಿದ್ದ.
ಹೀಗೆ ಅಚಾನಕ್ಕಾಗಿ ಕಣ್ಮರೆಯಾದ ವ್ಯಕ್ತಿ ಜಪಾನ್ನ ‘ಜೊಹಾತ್ಸು’ಗಳಲ್ಲಿ ಒಬ್ಬ, ಅಕ್ಷರಶಃ ಜಪಾನೀಸ್ ಭಾಷೆಯಲ್ಲಿ ‘ಆವಿಯಾದವರು’ ಎಂದರ್ಥ. ಪ್ರತಿ ವರುಷ ಜಪಾನ್ನಲ್ಲಿ ಸುಮಾರು ಎಂಬತ್ತು ಸಾವಿರ ಜನರು ಕಣ್ಮರೆಯಾಗುತ್ತಾರೆ. ಅವರಲ್ಲಿ ಕೆಲವರಂತೂ ಹೀಗೆ ಉದ್ದೇಶಪೂರ್ವಕವಾಗಿ ಹೋಗಿರುತ್ತಾರೆ. ಬೇರೆ ದೇಶಗಳಲ್ಲಿ ಕಾಣೆಯಾದ ವ್ಯಕ್ತಿಗಳ ಪ್ರಕರಣಗಳಿಗಿಂತ ಜಪಾನ್ನ , ‘ಜೊಹಾತ್ಸು’ ತೀರಾ ಭಿನ್ನವಾದದ್ದು.
ಜಪಾನ್ ಅಂತರ್ಮುಖಿಗಳ ದೇಶ. ಟೋಕಿಯೊ ವಿಶ್ವದ ಅತಿದೊಡ್ಡ ನಗರಗಳಲ್ಲಿ ಒಂದಾಗಿದ್ದರೂ, ಅದನ್ನು ಏಕಾಂತದ ನಗರವೆಂದೇ ಹೇಳಲಾಗುತ್ತದೆ. ತುಂಬಿದ `ರೈಲುಗಳೂ ಶಾಂತವಾಗಿರುತ್ತವೆ. ಜನರು ಪರಸ್ಪರರ ಹಾದಿಗಳನ್ನು ತಲೆ ಬಾಗಿಸಿಕೊಂಡೇ ದಾಟುತ್ತಾರೆ. ಸಹ ಪ್ರಯಾಣಿಕರು ಅಥವಾ ಅಪರಿಚಿತರ ನಡುವಿನ ಸಾಂದರ್ಭಿಕ ಸಂಭಾಷಣೆಯೂ ಅಸ್ತಿತ್ವದಲ್ಲಿಲ್ಲ ಎಂದು ಹೇಳಲಾಗುತ್ತದೆ!ಹೀಗೆ ಕೆಲಸ, ಮನೆ, ಸಂಸಾರ, ಅಸ್ಮಿತೆಯನ್ನು ತೊರೆದು ಅನಿಶ್ಚಿತವಾಗಿರುವ ನಿಗೂಢ ಆವಿಯಾಗುವುದಾದರೂ ಯಾಕೆ? ಇದಕ್ಕೆ ಕಾಣೆಯಾದ ವ್ಯಕ್ತಿಗಳಷ್ಟೇ ವಿಚಿತ್ರವಾದ ಕಾರಣಗಳಿವೆ. ಸಾಲ ವಸೂಲಿಗಾರರಿಂದ, ಕಿರುಕುಳ ನೀಡುವ ಗಂಡನಿಂದ, ಕೆಲಸ ಒತ್ತಡಗಳಿಂದ ತಪ್ಪಿಸಿಕೊಳ್ಳುವ ಬಾಹ್ಯ ಒತ್ತಡಗಳಾದರೆ ಇನ್ನು ಕೆಲವರಿಗೆ ಒತ್ತಡಗಳು ಆಂತರಿಕವಾಗಿವೆ. ಜಪಾನಿನ ಸಮಾಜದಲ್ಲಿ ಯಾವುದೇ ರೀತಿಯ ವಿಫಲತೆ ತೀರಾ ಅವಮಾನಕಾರಿ ಮತ್ತು ಅಸಹನೀಯ. ಐತಿಹಾಸಿಕವಾಗಿ, ಈ ಸಾಂಸ್ಕೃತಿಕ ನೀತಿಯು ಸೋಲಿನ ಅವಮಾನವನ್ನು ಸಹಿಸ ಲಾಗದೇ ‘ಸೆಪ್ಪುಕು’ ಎಂಬ ಧಾರ್ಮಿಕ ಆತ್ಮಹತ್ಯೆಗೆ ಒಳಗಾಗುತ್ತಿದ್ದ ‘ಸಮುರಾಯ್’ಗಳಿಂದ ಬಂದಿದೆ ಎನ್ನಲಾಗುತ್ತದೆ.
ಜಪಾನ್ನಲ್ಲಿ ಜನರು ಉಡುಗೆ ತೊಡುವ, ವರ್ತಿಸುವ, ಮಾತನಾಡುವ ರೀತಿ ಎಲ್ಲದರಲ್ಲೂ ಅನುಸರಣೆಯನ್ನು ನಿರೀಕ್ಷಿಸಲಾಗುತ್ತದೆ. ನೀವು ಎಂದಿಗೂ ನೀವಾಗಿರಲು ಸಾಧ್ಯವಿಲ್ಲ, ಯಾವಾಗಲೂ ಅನುಸರಿಸಬೇಕು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ರಾಜಕೀಯದಲ್ಲೂ ದಳಪತಿ ಅಧಿಪತಿ?
ಅಮೆರಿಕನ್ನರಿಗೆ ಅಥವಾ ತಂತ್ರಜ್ಞಾನದ ಉತ್ತುಂಗದಲ್ಲಿರುವ ಯಾವುದೇ ದೇಶದವರಿಗೆ ಹೀಗೆಜನರು ಉದ್ದೇಶಪೂರ್ವಕವಾಗಿ ಕಣ್ಮರೆಯಾಗುತ್ತಿದ್ದಾರೆ ಎಂಬುದನ್ನು ಕಲ್ಪಿಸಿಕೊಳ್ಳುವುದೇ ಕಷ್ಟ ಅಮೆರಿಕದಂಥ ದೇಶಗಳಲ್ಲಿ ಸಾಮಾಜಿಕ ಭದ್ರತಾ ಸಂಖ್ಯೆಗಳು (ಸೋಷಿಯಲ್ ಸೆಕ್ಯೂರಿಟಿ ನಂಬರ್) ಜನರನ್ನು ಹುಡುಕುವುದನ್ನು ಸುಲಭ ಪ್ರಕ್ರಿಯೆಯನ್ನಾಗಿ ಮಾಡುತ್ತದೆ. ಪುರಸಭೆಯ ದಾಖಲೆಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ ಮತ್ತು ನಿಗಮಗಳು ಗ್ರಾಹಕರ ದಿನನಿತ್ಯದ ಖರೀದಿಗಳನ್ನು ಮತ್ತು ಅವರು ವಾಸಿಸುವ ಸ್ಥಳಗಳನ್ನು ಟ್ಯಾಕ್ ಮಾಡುತ್ತವೆ. ಈ ಎಲ್ಲ ಮಾಹಿತಿಯು ಪೊಲೀಸರು ಮತ್ತು ಕ್ರೆಡಿಟ್ ತನಿಖಾಧಿ ಕಾರಿಗಳಿಗೆ ಲಭ್ಯವಿರುತ್ತದೆ.
ಜಪಾನ್ನಲ್ಲಿ ಗೌಪ್ಯತೆಯನ್ನು ಕಾಪಿಟ್ಟುಕೊಳ್ಳುವ ಕಟ್ಟುನಿಟ್ಟಾದ ಕಾನೂನುಗಳಿವೆ ಮತ್ತು ಪೊಲೀಸರು ಎಟಿಎಂ ವಹಿವಾಟುಗಳು ಅಥವಾ ಹಣಕಾಸು ದಾಖಲೆಗಳನ್ನು ಪರಿಶೀಲಿಸುವುದು ಕಾನೂನಿಗೆ ವಿರುದ್ಧವಾಗಿದೆ. ಇದಕ್ಕಿಂತ ಮುಖ್ಯವಾಗಿ ಜಪಾನ್ ಸಮಾಜದೊಳಗೆ ಒಂದು ಗೌಪ್ಯ ಸಮಾಜವಿದೆ; ಯಾರಿಗೂ ಗೋಚರಿಸದ ಒಂದು ಭೂಗತ ಲೋಕ. ‘ಸನ್ಯಾ’ ಮತ್ತು ‘ಕಾಮಗಾಸಾಕಿ’ಯಂಥ ಘಟ್ಟೋಗಳೆಂದು ಪರಿಗಣಿಸಲಾದ ನಗರಗಳಿವೆ. ಅಲ್ಲಿ ಜನರು ಸುಲಭವಾಗಿ ಕಣ್ಮರೆಯಾಗಬಹುದು. ಇವು ಹೆಚ್ಚಾಗಿ ‘ಯಾಕುಜಾ’ ಎಂದು ಕರೆಯಲ್ಪಡುವ ಜಪಾನಿನ ಮಾಫಿಯಾ ದಿಂದ ನಡೆಸಲ್ಪಡುವ ಪ್ರದೇಶಗಳಾಗಿವೆ ಮತ್ತು ಅಲ್ಲಿ ಯಾರಿಗೆ ಬೇಕಾದರೂ ಕೊಠಡಿಯನ್ನು ಬಾಡಿಗೆಗೆ, ಗುರುತಿನ ಚೀಟಿ ಅಥವಾ ಸರಕಾರಿ ದಾಖಲೆಗಳ ಅಗತ್ಯವಿಲ್ಲದೆ ನೀಡುತ್ತಾರೆ. ಅಗ್ಗದ ಹೋಟೆಲ್ಗಳು ಮತ್ತು ಒಂದು ಕೋಣೆಯ ಅಪಾರ್ಟ್ ಮೆಂಟ್ಗಳನ್ನು ನೀವು ಕಾಣಬಹುದು. ಕೆಲವೊಂದಕ್ಕೆ ಶೌಚಾಲಯಗಳಾಗಲಿ ಅಥವಾ ಕಿಟಕಿಗಳಾಗಲಿ ಇರುವುದಿಲ್ಲ.ಅಭಿವೃದ್ಧಿ ಹೊಂದುತ್ತಿರುವ ಅನೌಪಚಾರಿಕ ಸ್ಥಳೀಯ ಆರ್ಥಿಕತೆಯಲ್ಲಿ ರಹಸ್ಯವಾದ ಕೆಲಸವನ್ನುಮಾಡಬಹುದು.ಕಾನೂನುಬದ್ಧ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ನಗದು ರೂಪದಲ್ಲಿ ಹಣವನ್ನು ಪಡೆಯಬಹುದು.
ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ, ಗುಪ್ತ ಪ್ರಪಂಚಗಳು ಜಪಾನಿನ ಜನಪ್ರಿಯ ಸಂಸ್ಕೃತಿಯ ಭಾಗವಾಗಿದೆ. ಹರುಕಿ ಮುರಕಾಮಿ ಕಥೆಗಳಲ್ಲಿ ಆನೆಗಳು ಕಣ್ಮರೆಯಾಗುತ್ತವೆ ಮತ್ತು ಮಹಿಳೆಯರು ಏಣಿಗಳಿಂದ ಸಮಾನಾಂತರ ವಾಸ್ತವದೊಳಗೆ (ಪ್ಯಾರಲಲ್ ರಿಯಾಲಿಟಿ) ಇಳಿಯುತ್ತಾರೆ. ‘ನೈಟ್ ಮೂವಿಂಗ್ ಸರ್ವೀಸಸ್” ಅಥವಾ ‘ಯೋನಿಗೆ-ಯಾ’ (ನೈಟ್ ಎಸ್ಟೇಪ್ ಶಾಪ್ ಗಳು) ಎಂದು ಕರೆಯಲ್ಪಡುವ ಕಂಪನಿಗಳು ಆವಿಯಾಗಲು ಬಯಸುವವರಿಗೆ ಸಮಗ್ರ ಪರಿಹಾರಗಳನ್ನು ನೀಡುತ್ತವೆ.
‘ಜೊಹಾತ್ಸು ಇನ್ ಟು ಥಿನ್ ಏರ್’ ಎಂಬ ಇತ್ತೀಚೆಗೆ ಬಿಡುಗಡೆಯಾದ ಡಾಕ್ಯುಮೆಂಟರಿಯಲ್ಲಿ, ಲೇನ ಮೊರ್ಗೇ ಬರೆದ ‘ವ್ಯಾನಿಷ್’ ಎಂಬ ಪುಸ್ತಕದಲ್ಲಿ ಸಾಲಗಾರರಿಂದ ತಪ್ಪಿಸಿಕೊಳ್ಳಲು ಆವಿಯಾದ ‘ಕಂದ’, ‘ತಕುಯ’, ಜಪಾನೀಸ್ ಸಮಾಜ ಮಹಿಳೆಯ ಮೇಲೆ ಹೇರುವ ಒತ್ತಡದಿಂದ ತಪ್ಪಿಸಿಕೊಂಡ ‘ಯುಮಿ’, ವಿಚ್ಛೇದನದ ಅಸಾಧ್ಯತೆಯಿಂದ ಹೊರಬರಲು ನಿರ್ಧರಿಸಿದ ‘ಹೀರೊ’, ತನ್ನನ್ನು ಬಿಟ್ಟು ಹೋದ ಇಪ್ಪತ್ತಾರು ವರುಷದ ಮಗನನ್ನು ಕಣ್ಣೀರಿನಿಂದ ಹುಡುಕುತ್ತಾ ತಾಯಿಯೊಬ್ಬಳು ಖಾಸಗಿ ತನಿಖಾಧಿಕಾರಿಗಳನ್ನು : ನೇಮಿಸಿಕೊಳ್ಳುವ ನೈಜ ಘಟನೆಗಳನ್ನು ಬಿಂಬಿಸಲಾಗಿದೆ. ಜೊಹಾತ್ಸು’ಗಳುನಾಯಕರೂ ಅಲ್ಲ, ಖಳನಾಯಕರಂತೂ ಅಲ್ಲವೇ ಅಲ್ಲ. ಕಠಿಣ ಸಂದರ್ಭಗಳಲ್ಲಿ ಸಿಲುಕಿಕೊಂಡ, ತೀವ್ರ ಆಯ್ಕೆಗಳನ್ನು ಮಾಡಿದ ಸಂಕೀರ್ಣ ಮನುಷ್ಯರು. ಜಾಗತಿಕ ಸಂದರ್ಭದಲ್ಲಿ ‘ಜೊಹಾತ್ಸು’ ಸಾಮಾಜಿಕ ಒತ್ತಡ ಮತ್ತು ವೈಯಕ್ತಿಕ ಸಂತೋಷದ ನಡುವಿನ ಸಮತೋಲನಕ್ಕೆ ಸಂಬಂಧಿ ಸಿದ ಸಾರ್ವತ್ರಿಕ ಸಂದಿಗ್ಧತೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಜೊಹಾತ್ಸು ವಿದ್ಯಮಾನವು ಆಧುನಿಕ ಸಮಾಜದ ಬಗ್ಗೆ ಯಶಸ್ಸಿನ ಒತ್ತಡದ ಬಗ್ಗೆ ಅತಿ-ಸಂಪರ್ಕದ ಯುಗದಲ್ಲಿನ ಒಂಟಿತನದ ಬಗ್ಗೆ ಜೀವನದ ನಿಜವಾದ ಉದ್ದೇಶದ ಬಗ್ಗೆ ಏನು ಹೇಳುತ್ತದೆ ಮತ್ತು ಯಾವ ಪರ್ಯಾಯಗಳು ಅಸ್ತಿತ್ವದಲ್ಲಿವೆ? ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಸಾರುವ, ಸಂಬಂಧಗಳನ್ನು ಗಟ್ಟಿಗೊಳಿಸುವ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಒಂದು ಸುಂದರ ಸಮಾಜದ ಪುನರ್ ನಿರ್ಮಾಣವಾಗುವುದಾದರೂ ಹೇಗೆ?ಜೊಹಾತ್ಸು’ ವಿದ್ಯಮಾನವು ಸುಲಭವಾದ ಉತ್ತರಗಳನ್ನು ನೀಡುವುದಿಲ್ಲ, ಆದರೆ, ನಾವು ನಿರ್ಲಕ್ಷಿಸಲು ಸಾಧ್ಯವಾಗದ ನಿರ್ಣಾಯಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ‘ಜೊಹಾತು’ ಕಥೆಗಳು ನಮ್ಮದೇ ಜೀವನದ ಹತಾಶೆಗಳು, ಹಂಬಲಗಳು, ಎಲ್ಲವನ್ನು ತೊರೆಯಬೇಕೆಂಬ ವಿಚಿತ್ರ ಕನಸನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಅಂದಹಾಗೆ ನಿಮ್ಮ ಕಥೆ ಏನು? ನಿಮ್ಮದೇ ಅಸ್ಥಿತೆಯನ್ನು ಕಂಡುಕೊಳ್ಳಲು ನೀವು ಎಷ್ಟು ದೂರ ಹೋಗಲಿಚ್ಚಿಸುತ್ತೀರಿ? ಏನನ್ನು ತೊರೆಯಲು ಸಿದ್ಧರಿದ್ದೀರಿ? ಕ್ಷೇಮವಾಗಿರಿ.