ಅಂಕಸಮುದ್ರ ಕೆರೆ ರಾಮ್‌ಸಾ‌ರ್ ತಾಣ

ಅಂಕಸಮುದ್ರ ಕೆರೆ ರಾಮ್‌ಸಾ‌ರ್ ತಾಣ


ಸಿ.ಶಿವಾನಂದ ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಿಂದ ಕೂಗಳತೆ ದೂರದಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಎಂಬ ಗ್ರಾಮವಿದೆ. ಇಲ್ಲಿ 244 ಎಕರೆ ವಿಸ್ತಾರವಾದ ಕೆರೆಯೂ ಇದೆ. ಕೆರೆಯಲ್ಲಿ ಹರಡಿರುವ ಕರಿಜಾಲಿ ಮರಗಳು ಅಪರೂಪದ, ದೇಶ-ವಿದೇಶದ ಸಹಸ್ರಾರು ಬಾನಾಡಿಗಳಿಗೆ ಆಶ್ರಯತಾಣವಾಗಿವೆ. ಹೀಗಾಗಿ ವಿಶಾಲವಾದ ಕೆರೆಯೊಂದು ಪಕ್ಷಿಧಾಮ ಎಂದು ಹೆಗ್ಗಳಿಕೆ ಪಡೆದಿದೆ. ಇದು ಕಲ್ಯಾಣ ಕರ್ನಾಟಕದ ಮೊದಲ ಪಕ್ಷಿಧಾಮ.ಕೆರೆ ಮಧ್ಯದಲ್ಲಿ ನಿರ್ಮಿಸಿರುವ 50ಕ್ಕೂ ಹೆಚ್ಚು ಕೃತಕ ನಡುಗಡ್ಡೆಗಳಲ್ಲಿ ಎತ್ತರದ ಮತ್ತು ನೆಲಕ್ಕೊರಗಿದ ಗಿಡಮರಗಳಲ್ಲಿ ಪಕ್ಷಿಗಳು ಬೀಡುಬಿಟ್ಟಿವೆ. ಜೊತೆಗೆ ನೀರಿನಲ್ಲಿ ಹೇರಳವಾಗಿ ದೊರೆಯುವ ಆಹಾರ ಕೂಡ ಅವುಗಳಿಗೆ ವರದಾನವಾಗಿದೆ. ತುಂಗಭದ್ರಾ ಹಿನ್ನೀರಿನಿಂದ ಯಂತ್ರಗಳ ಸಹಾಯದಿಂದ ಕೆರೆಗೆ ನೀರು ಹರಿಸಿದ್ದು ಮತ್ತು ಉತ್ತಮ ಮುಂಗಾರಿನಿಂದಾಗಿ ಕೆರೆ ಸಂಪೂರ್ಣ ಭರ್ತಿಯಾಗಿದ್ದು ಸೊಬಗು ಹೆಚ್ಚಾಗಿದೆ.ವಿಜಯನಗರ-ಬಳ್ಳಾರಿ ಜಿಲ್ಲೆಯ ಪಕ್ಷಿ ತಜ್ಞರು, ಪಕ್ಷಿ ಪ್ರೇಮಿಗಳು, ಅಂಕಸಮುದ್ರದ ಯುವ ಬ್ರಿಗೇಡ್‌ ಸದಸ್ಯರು, ಹಗರಿಬೊಮ್ಮನಹಳ್ಳಿಯ ಗ್ರೀನ್ ಎಚ್‌ಬಿಎಚ್ ತಂಡದ ಸದಸ್ಯರ ಕಾಳಜಿ ಮತ್ತು ನಿರಂತರ ಶ್ರಮ, ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ ಪರಿಣಾಮವಾಗಿ ಭಾನಾಡಿಗಳಿದ್ದಈ ಕೆರೆ ಪಕ್ಷಿಧಾಮವಾಗುವ ಮೂಲಕ ಪಕ್ಷಿಪ್ರೇಮಿಗಳು, ಕಂಡಿದ್ದ ಕನಸು ನನಸಾಗಿದೆ.


2016ರ ಸೆಪ್ಟೆಂಬರ್‌ನಲ್ಲಿ ರಾಜ್ಯ ವನ್ಯಜೀವಿ ಸಲಹಾ ಮಂಡಳಿಯಲ್ಲಿ ಪಕ್ಷಿಧಾಮಕ್ಕಾಗಿ ಪಕ್ಷಿತಜ್ಞ ಸಮದ್ ಕೊಟ್ಟೂರು, ವಿಜಯ್ ಇಟ್ಟಿಗಿ ಮತ್ತು ತಂಡ ಸಲ್ಲಿಸಿದ್ದ ಪ್ರಸ್ತಾವನೆ ಅಂಗೀಕಾರಗೊಂಡಿತು. 2017ರ ಫೆಬ್ರುವರಿಯಲ್ಲಿ ಅಂಕಸಮುದ್ರ ಕರೆ ಪಕ್ಷಿಗಳ ಸಂರಕ್ಷಿತ ಪ್ರದೇಶವೆಂದು ಘೋಷಣೆ ಆಯಿತು. ಈ ಪ್ರದೇಶ ಅರಣ್ಯ ಇಲಾಖೆಯ ಸುಪರ್ದಿಗೆ ಸೇರಿತು. ಒಂದೊಂದೇ ಮೂಲಸೌಕರ್ಯಗಳು ಬರತೊಡಗಿದವು. ಒತ್ತುವರಿಯಾಗಿದ್ದ ಕೆರೆ ಪ್ರದೇಶವನ್ನು ತೆರವುಗೊಳಿಸಲಾಯಿತು. ವೀಕ್ಷಣಾ ಗೋಪುರ ನಿರ್ಮಾಣಗೊಂಡಿತು. ನಾಲ್ಕು ಜನ ಕಾವಲುಗಾರರ ನೇಮಕವೂ ಆಯಿತು. ಮೀನುಗಾರರ ಬಲೆಗಳು ಪಕ್ಷಿಗಳ ಪ್ರಾಣಕ್ಕೆ ಕಂಟಕವಾಗಿತ್ತು. ಇದನ್ನು ತಡೆಯುವುದಕ್ಕೂ ಸಾಧ್ಯವಾಯಿತು.ಇಲ್ಲಿರುವ 50 ಸಾವಿರಕ್ಕೂ ಹೆಚ್ಚು ಪಕ್ಷಿಗಳು ವಿಶೇಷವಾಗಿ ಅಲಾಸ್ಕ, ಸೈಬೀರಿಯಾ, ಯುರೋಪ್ ಸೇರಿದಂತೆ ದೇಶ-ವಿದೇಶಗಳಿಂದ ಆಹಾರ ಅರಸಿ ವಲಸೆ ಬಂದಿವೆ.

ಇದನ್ನೂ ಓದಿ:ಡಿಕೆಶಿ ಎಲ್ಲಿದ್ದಾರೆ? ಎಲ್ಲಿರುತ್ತಾರೆ?

ಐಯುಸಿಎನ್ (ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ನರ್‌ವೇಶನ್ ಆಫ್ ನೇಚರ್)ನ ವರದಿಯಂತೆ ಅಳಿವಿನಂಚಿನಲ್ಲಿರುವ ದೇಶಿಯ ಹೆಜ್ಜಾರ್ಲೆ ಸಂತತಿ ಹೆಚ್ಚಿಸಿಕೊಂಡಿರುವುದು ಇಲ್ಲಿನ ವೈಶಿಷ್ಟ್ಯ, ಇಲ್ಲಿ ಹೇರಳವಾಗಿ ದೊರೆಯುವ ಮೀನು ಮತ್ತಿತರ ಜಲಚರಗಳನ್ನು ಪಕ್ಷಿಗಳು ಹಿಡಿಯುವ ಬಗೆ ಮತ್ತು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿನ ಸಮೃದ್ಧ ಆಹಾರ ಅರಸಿ ಪಕ್ಷಿಗಳು ಗುಂಪುಗುಂಪಾಗಿ ಬೆಳಗಿನ ಜಾವ ತೆರಳುವ, ಸಂಜೆ ವೇಳೆ ಆಗಮಿಸುವ ದೃಶ್ಯವನ್ನು ನೋಡುವುದೇ ಚಂದ. ಅದೊಂದು ದೃಶ್ಯ ಕಾವ್ಯವೇ ಸರಿ.2024 ಫೆಬ್ರುವರಿಯಲ್ಲಿ ಪಕ್ಷಿ ತಜ್ಞರು ನಡೆಸಿದ ಗಣತಿಯಲ್ಲಿ ಸ್ಥಳೀಯ ಮತ್ತು ದೇಶ-ವಿದೇಶಗಳ 168 ಪ್ರಭೇದಗಳ 48,825 ಪಕ್ಷಿಗಳು ಇದ್ದವು. ಈ ವರ್ಷ ಜನವರಿ 25 ರಂದು ನಡೆಸಿದ ಗಣತಿಯಲ್ಲಿ 132 ಪ್ರಭೇದಗಳ 50 ಸಾವಿರಕ್ಕೂ ಹೆಚ್ಚು ಬಾನಾಡಿಗಳು ಕಂಡುಬಂದಿವೆ. ನವೆಂಬರ್ ತಿಂಗಳಿನಿಂದ ಮಾರ್ಚ್‌ವರೆಗೂ ಜಲಪಕ್ಷಿಗಳ ಈ ಅವಾಸಸ್ಥಾನ ಸದಾ ಜೀವಂತಿಕೆಯಿಂದ ಕೂಡಿರುತ್ತದೆ.

ಈ 11 ಪ್ರದೇಶವನ್ನು ಸುಂದರಗೊಳಿಸಿ ಹೆಚ್ಚು ಪ್ರಭೇದಗಳ ಪಕ್ಷಿಗಳು ಇಲ್ಲಿಗೆ ಬರುವಂತೆ ಮಾಡಿದ್ದರ ಫಲವೇ 2024ರ ಜನವರಿ 31ರಂದು ರಾಮ್‌ಸಾರ್ ಎನ್ನುವ ಅಪರೂಪದ ಜೀವವೈವಿಧ್ಯ ಹೊಂದಿರುವ ಜಾಗತಿಕ ಮನ್ನಣೆ ಪಡೆದ ತಾಣವಾಯಿತು. ಇದೇ ವೇಳೆ ಗದಗ ಜಿಲ್ಲೆಯ ಮಾಗಡಿ ಕೆರೆ ಸಂರಕ್ಷಣಾ ಮೀಸಲು ಪ್ರದೇಶ, ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದೀಮುಖ ಸಹ ಈ ಮನ್ನಣೆ ಪಡೆದವು. ಕರ್ನಾಟಕದ ಮೊದಲ ಸಂರಕ್ಷಿತ ಚೌಗು ಪ್ರದೇಶವಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮಕ್ಕೆ ರಾಮ್‌ಸರ್ ಟ್ಯಾಗ್ ದೊರೆತ ಎರಡು ವರ್ಷಗಳ ನಂತರ ಕರ್ನಾಟಕದ ಈ ತಾಣಗಳಿಗೆ ಮನ್ನಣೆ ಸಿಕ್ಕಿದೆ.ಇಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಬಾನಾಡಿಗಳ ಮಹಾಸಂಗಮವಾಗುತ್ತದೆ. ವಲಸೆ ಬರುವ ಬಾರ್ನ್ ಸ್ವಾಲೋ (ಕವಲು ತೋಕೆ), ರೋಸಿ ಸ್ಟಾರ್ಲಿಂಗ್ (ಗುಲಾಬಿ ಕಬ್ಬಕ್ಕಿ), ಓಸ್‌ಪ್ರೆ (ಮೀನು ಡೇಗೆ). ವಿಸ್ಕರ್ಡ್ ಟರ್ನ್ (ಮೀಸೆ ರೀವ), ಗ್ರೀನಿಷ್ ವಾರ್ಬಲ‌ರ್ (ಹಸಿರು ಎಲೆ ಉಲಿಯಕ್ಕಿ), ಗ್ರೇ ವಾಗ್‌ಟೆಲ್ (ಬೂದು ಸಿಪಿಲೆ)

Leave a Comment