ರಂಗಮಂಚದ ಮೇಲೆ ಗೆಜ್ಜೆಯದೇ ಸದ್ದು
ವಿದುಷಿ ಸಂಸ್ಕೃತಿ ಪ್ರಭಾಕರ ಪ್ರಸ್ತುತಪಡಿಸಿದ ‘ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ನಾಟಕ ಇತ್ತೀಚೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಹೊಯ್ಸಳ ಸಾಮ್ರಾಜ್ಯದ ಸಾಮ್ರಾಜ್ಞೆ ಶಾಂತಲೆಯ ಆತ್ಮವೃತ್ತವನ್ನು ಆಧರಿಸಿ ಲೇಖಕಿ ಸುಧಾ ಆಡುಕಳ ರಚಿಸಿದ ರಂಗಪಠ್ಯವನ್ನು ಗಣೇಶ ಎಲ್ಲೂರು ನಿರ್ದೇಶಿಸಿದರು.ಕಲಾಭಿರುಚಿ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುವುದು ಸಹಜವೇ ಆಗಿದ್ದರೂ ನಾಟ್ಯವು ಕಲಾಭಿರುಚಿಯನ್ನು ತಣಿಸುವಷ್ಟು ಸಶಕ್ತವಾಗಿರುತ್ತದೆ ಎಂದು ಕಾವ್ಯಮೀಮಾಂಸಕರೇ ಒಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಯೋಚಿಸಿ ನೋಡಿದಾಗ ವರ್ತಮಾನದ ಜಗತ್ತಿನಲ್ಲಿಯೂ ನಾಟ್ಯ ಕುರಿತಾದ ಆಸಕ್ತಿ ಕಡಿಮೆಯಾಗಿಲ್ಲ. ಬದಲಾಗಿ ವೈವಿಧ್ಯಮಯ ಸ್ವರೂಪದಲ್ಲಿ ರಸಿಕರ ಕಣ್ಣೆದುರು ಬಂದು ಕುತೂಹಲ ಮತ್ತು ಆಸಕ್ತಿಯನ್ನು ಕೆರಳಿಸುತ್ತಲೇ ಇದೆ.ನೃತ್ಯದಲ್ಲಿ ಪಳಗಿದ ಕಲಾವಿದೆ ತಮ್ಮ ಕಲಾನೈಪುಣ್ಯದಿಂದ ಪ್ರೇಕ್ಷಕರ ಚಿತ್ರವನ್ನು ಬಹಳ ಹೊತ್ತು ಹೇಗೆ ತನ್ನಡೆಗೆ ಸೆಳೆಯಬಲ್ಲರು ಎಂಬುದಕ್ಕೆ ಈ ಏಕವ್ಯಕ್ತಿ ನಾಟಕವೇ ನಿದರ್ಶನ.
ನಾಟ್ಯದರಸಿ ಶಾಂತಲೆಯ ಬಾಳಿನ ಏರಿಳಿತಗಳ ಮನೋಜ್ಞ ಕಥಾಹಂದರದ ಗಟ್ಟಿ ನೆಲೆ ಈ ನಾಟಕಕ್ಕಿದ್ದು, ಐತಿಹಾಸಿಕ ಕಥೆಯೊಂದನ್ನು ರಂಗಪಠ್ಯವಾಗಿಸುವಲ್ಲಿ ಸುಧಾ ಆಡುಕಳ ಯಶಸ್ವಿಯಾಗಿದ್ದಾರೆ. ಭಾವಕ್ಕೆ ಅನುಗುಣವಾದ ಭಾಷೆಯ ಸೊಗಡನ್ನು ಕೇಳುಗರು ಪ್ರಶಂಸಿಸದೇ ಇರಲಾರರು. ರಂಗಭೂಮಿಯ ಸಾಧ್ಯತೆಗಳು ಕಲ್ಪನೆಗೆ ನಿಲುಕಲಾರವು ಎಂಬುದು ಎಷ್ಟು ಸತ್ಯವೋ, ರಂಗ ನಿರ್ದೇಶಕನ ತಾದಾತ್ಮಭಾವವೂ ವಿಶಿಷ್ಟ ಪ್ರಭಾವ ಬೀರುತ್ತದೆ ಎಂಬುದೂ ಅಷ್ಟೇ ಸತ್ಯ, ನಿರ್ದೇಶಕ ಗಣೇಶ ಎಲ್ಲೂರ ರಂಗಪರಿಕರಗಳನ್ನು ಔಚಿತ್ಯದ ಪರಿಧಿಯನ್ನು ಮೀರದಂತೆ ಸಿದ್ಧವಸ್ತುವನ್ನಾಗಿಸಿದ ಬಗೆ ಹಿತವೆನಿಸುತ್ತದೆ.ವಿದುಷಿ ಸಂಸ್ಕೃತಿರಂಗಚಲನೆಯಲ್ಲಾಗಲಿ, ನೃತ್ಯದಲ್ಲಾಗಲಿ, ಮಾತಿನ ಓಘದಲ್ಲಾಗಲಿ,ಭಾವತೀವ್ರತೆಯಲ್ಲಾಗಲಿ ತಮ್ಮನ್ನು ನಿಯಂತ್ರಿಸಿಕೊಂಡ ಬಗೆ ಕೆಲವೊಮ್ಮೆ ಅಚ್ಚರಿಗೆ ಕಾರಣವಾಗುತ್ತದೆ. ನಟಿ ಮತ್ತು ನಿರ್ದೇಶಕರ ಶ್ರದ್ಧೆಯಿಂದ ಮಾತ್ರ ಇಂತಹ ಪ್ರಯೋಗ ಸಾಧ್ಯವಾದೀತು ಎನಿಸುತ್ತದೆ.ನೃತ್ಯವನ್ನೇ ತನ್ನ ಉಸಿರಾಗಿಸಿಕೊಂಡ ಶಾಂತಲೆಗೆ, ಹೊಯ್ಸಳರ ದೊರೆಯಿಂದ ಬಂದ ವಿವಾಹದ ಆಹ್ವಾನ
ಆವ್ಯಕ್ತವಾದ ಸಂಕಟವನ್ನೇ ಉಂಟುಮಾಡುತ್ತದೆ. ನಾಡಿನ ಜನರ ಸಂಭ್ರಮವನ್ನು ಅಲ್ಲಗಳೆಯಲಾಗದ, ತನ್ನ ನೃತ್ಯದ ಪ್ರೀತಿಯನ್ನೂ ತೊರೆಯಲಾಗದ ಅವಳ ಒಳಗಿನ ಗೊಂದಲ, ತೊಳಲಾಟ ನಾಟ್ಯದ ಬಹುಮುಖ್ಯ ಸಂವೇದನೆಯ ಭಾಗವಾಗಿ ನಿಲ್ಲುತ್ತದೆ.
ಇದನ್ನೂ ಓದಿ:ಎಐ ಮತ್ತು ಭಾಷಾಂತರದಲ್ಲಿ ಸ್ಥಿತ್ಯಂತರ
ಕೊನೆಗೊಮ್ಮೆ ತನ್ನ ನಾಟ್ಯದ ಭಂಗಿಗಳನ್ನ ಶಿಲ್ಪವಾಗಿಸುವ ಅವಳ ಹಂಬಲ, ಪ್ರಥಮರಾತ್ರಿಯ ಮಧುರ ಅನುಭವವನ್ನೂ ಮೀರಿ ನಿಲ್ಲುವುದು ಆಶ್ಚರ್ಯದ ದ್ಯೋತಕವೆಂದೇ ಭಾವಿಸಬೇಕಾಗುತ್ತದೆ. ವಿಷ್ಣುವರ್ಧನನ ಶೃಂಗಾರ ಚೇಷ್ಟೆಗಳನ್ನು, ಶಾಂತಲೆಯ ಸ್ಥಿತಪ್ರಜ್ಞ ಸ್ಥಿತಿಯನ್ನು ಏಕಕಾಲದಲ್ಲಿ ರಂಗದಲ್ಲಿ ಅಭಿನಯಿಸುವುದು ನಟಿಯ ನೈಪುಣ್ಯತೆಯನ್ನು ಒರೆಗೆ ಹಚ್ಚುತ್ತದೆ. ನಟಿ ಅದನ್ನು ಸಮರ್ಥವಾಗಿನಿಭಾಯಿಸಿದ್ದಾರೆ.ನಾಟಕದ ಪ್ರತಿಯೊಂದು ಹೆಜ್ಜೆಯಲ್ಲೂ ಕಾಲಿಗೆ ಕಟ್ಟಿದ ಗೆಜ್ಜೆ ಪ್ರೇಕ್ಷಕರೊಂದಿಗೆ ಮಾತನಾಡುತ್ತದೆ. ಮಾತನಾಡುತ್ತದೆ ಎನ್ನುವುದಕ್ಕಿಂತ ಅವರೊಳಗಿನ ಸೂಕ್ಷಭಾವನೆಗಳಿಗೆ ಕನ್ನಡಿ ಹಿಡಿಯುತ್ತದೆ ಎಂಬುದೇ ಸೂಕ್ತ.ಹೊಯ್ಸಳರ ಕುಲವನ್ನು ಬೆಳಗುವ ದೀಪವೊಂದು ಉದಿಸಿತೆಂದು ತುಂಬಿದೊಲವಿನಿಂದ ತೊಟ್ಟಿಲು ತೂಗುತ್ತ ಲಾಲಿಯನ್ನು ಹಾಡುವ ತಾಯಿಗೆ, ಹಸುಳೆಯನ್ನು ಕಳೆದುಕೊಂಡಾಗ ಆಗುವ ವೇದನೆಯೇ ವೈರಾಗ್ಯದ ಪಥವನ್ನು ಸಾಕ್ಷಾತ್ಕರಿಸುವುದು ನೋಡುಗರ ಹೃದಯವನ್ನು ಅದ್ರ್ರಗೊಳಿಸುತ್ತದೆ. ಇಂತಹ ಸಂದರ್ಭಗಳಲ್ಲಿ ನಟನೆಗೆ ಸಂಯಮ ಬೇಕು. ವಾಚಿಕಾಭಿನಯಕ್ಕಿಂತ ಇಲ್ಲಿ ಮೌನವೇ ಹೆಚ್ಚು ಪರಿಣಾಮ ಬೀರುತ್ತದೆ. ಅಂತಹ ಸ್ವಲ್ಪ ಮೌನ ಇಲ್ಲಿ ಅಪೇಕ್ಷಣೀಯವಾಗಿತ್ತು.
ಯುವ ಕಲಾವಿದರೇ ಹಿನ್ನೆಲೆ ಸಂಗೀತದ ನೇತೃತ್ವವನ್ನು ವಹಿಸಿದ್ದು ರಂಗಭೂಮಿಗೆ ಆಶಾದಾಯಕ ಸಂಗತಿ.
ಸಾಹಿತ್ಯವನ್ನು,ಭಾವಬಿಂದುವನ್ನು ಪರಿಣಾಮಕಾರಿಯಾಗಿ ತಲುಪಿಸಲು ಮತ್ತಷ್ಟು ಸಾತ್ವಿಕ ಪ್ರಯತ್ನ ಸಂಗೀತಗಾರರಿಗೆ ಬೇಕು ಅನ್ನಿಸಿತು. ರಂಗ ಪ್ರಯೋಗಗಳು ಹೆಚ್ಚಾದಂತೆಲ್ಲ ಇದು ಸಾಧ್ಯವಾದೀತು. ಒಟ್ಟಿನಲ್ಲಿ ಶಾಂತಲೆಯ ಗೆಜ್ಜೆಯ ಹೆಜ್ಜೆಯು ಪರಿಪೂರ್ಣವಾದ ತೇಜಸ್ಸಿನೆಡೆಗೆ ಪ್ರಯಾಣ ಬೆಳೆಸುವಲ್ಲಿ ರಂಗ ಪ್ರಯೋಗವು ಒಂದು ಕಾವ್ಯವಾಗುತ್ತದೆ ಎಂಬುದಕ್ಕೆ ಈ ನಾಟಕ ಸಾಕ್ಷಿಯಂತಿತ್ತು. ವಿದ್ವಾನ್ ಜಿ.ಪಿ. ಪ್ರಭಾಕರ ತುಮರಿ ಅವರ ಪ್ರಜ್ಞಾನಂ ಟ್ರಸ್ಟ್ಈರಂಗಪ್ರಯೋಗವನ್ನು ಏರ್ಪಡಿಸಿತ್ತು.