ನಿತೀಶ್ ನೂರು : ಭಾರತ ಅಪಾಯದಿಂದ ಪಾರು

ನಿತೀಶ್ ನೂರು : ಭಾರತ ಅಪಾಯದಿಂದ ಪಾರು

ಮೆಲ್ಲೊರ್ನ್: ಪಾದರ್ಪಣೆ ಟೆಸ್ಟ್ ಸರಣಿಯಲ್ಲೇ ಇಪ್ಪತ್ತೊಂದು ವರ್ಷ ವಯಸ್ಸಿನ ನಿತೀಶ್ ಕುಮಾರ್ ರೆಡ್ಡಿ ಶತಕದೊಂದಿಗೆ ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ‘ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯದ ಮೂರನೇ ದಿನದ ಗೌರವವನ್ನು ಭಾರತಕ್ಕೆ ತಂದುಕೊಟ್ಟಿದ್ದು. ಸೋಲಿನತ್ತ ಸಾಗಿದ್ದ ಪಂದ್ಯದಲ್ಲಿ ಭಾರತ ಮೈಕೊಡವಿ ನಿಂತಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್‌ನ ಮೊದಲ ಸರದಿಯಲ್ಲಿ ಆಸೀಸ್‌ನ 474ಕ್ಕೆ ಉತ್ತರವಾಗಿ ಭಾರತ ಮೂರನೇ ದಿನದಾಟದ ಕೊನೆಯಲ್ಲಿ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 116 ಓವರ್‌ಗಳ ಆಟದಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 358ರ ಸ್ಕೋರ್ ತಲುಪಿದ್ದು, 116 ರನ್‌ಗಳಿಂದ ಹಿಂದಿದೆ.
ಸರಣಿಯ ಪ್ರಾರಂಭದಿಂದಲೂ ದಿಟ್ಟ ಹಾಗೂ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಸ್ಮರಣೀಯ ಹೋರಾಟ ಪ್ರದರ್ಶಿಸಿ ಭಾರತವನ್ನು ಫಾಲೋ-ಆನ್ ಭೀತಿಯಿಂದ ಪಾರು ಮಾಡಿದರಲ್ಲದೇ ಮೂರಂಕಿಯನ್ನೂ ಪೂರೈಸಿ ಎಂಸಿಜಿ ಮೈದಾನದಲ್ಲಿ ಶತಕ ಗಳಿಸಿದ 8ನೇ ಆಟಗಾರ ಎನ್ನಿಸಿಕೊಂರು.
ಒಟ್ಟು 176 ಎಸೆತಗಳನ್ನೆದುರಿಸಿದ ನಿತೀಶ್ ಕುಮಾರ ರೆಡ್ಡಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಇದ್ದ 105 ರನ್ ಸಿಡಿಸಿ ಮೂರನೇ ದಿನದಾಟದ ವೇಳೆಗೆ ಅಜೇಯರಾಗುಳಿದಿದ್ದರೆ ಕೊನೆಯ ಬ್ಯಾಟರ್ ಮೊಹಮ್ಮದ್ ಸಿರಾಜ್ 2 ರನ್ ಗಳಿಸಿದ್ದು, ಕ್ರೀಸ್ ಕಾಯ್ದುಕೊಂಡಿದ್ದಾರೆ.

ಮೈದಾನದಲ್ಲಿ ಪುಷ್ಪ – ಬಾಹುಬಲಿ
ಹಾಗೆ ನೋಡಿದರೆ ನಿತೀಶ್ ಅವರ ಶತಕ ಪೂರ್ತಿಯಾಗುವುದೂ ಒಂದು ಕ್ಷಣ ಸಂಶಯಾಸ್ಪದವೆನಿಸಿತ್ತು. 350ರ ಮೊತ್ತದಲ್ಲಿ ಜಸ್ಟೀತ್ ಬುಮ್ರಾ ಶೂನ್ಯ ಸುತ್ತಿ ಪ್ಯಾಟ್‌ ಕಮಿನ್ಸ್‌ರ 27ನೇಓವರಿನ ಮೂರನೇ ಎಸೆತದಲ್ಲಿ ಉಸ್ಮಾನ್‌ ಖವಾಜಾ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದಾಗ ನಿತೀಶ್ ಇನ್ನೊಂದು ತುದಿಯಲ್ಲಿ 99 ರನ್‌ಗಳೊಂದಿಗೆ ಬ್ಯಾಟ್ ಮಾಡುತ್ತಿದ್ದರು. ಕೊನೆಯವರಾಗಿ ಮೈದಾನಕ್ಕಿಳಿದ ಮೊಹಮ್ಮದ್ ಸಿರಾಜ್ ಪಾಲಿಗೆ ಆ ಓವರಿನ ಉಳಿದ ಮೂರು ಎಸೆತಗಳಲ್ಲಿ ವಿಕೆಟ್ ಉಳಿಸಿಕೊಳ್ಳುವುದೇ ಅನುಮಾನವಾಗಿತ್ತು. ಆ ಕ್ಷಣದಲ್ಲಿ ಇಡೀ ಭಾರತವೇ ಸಿರಾಜ್ ಆ ಉಳಿದ ಮೂರು ಎಸೆತಗಳಲ್ಲಿ ಔಟಾಗದೇ ಉಳಿಯಲಿ ಎಂದು ಪ್ರಾರ್ಥಿಸಿದ್ದರೆ ಅಚ್ಚರಿಯೇನಿಲ್ಲ. ಸಿರಾಜ್ ಆ ಮೂರು ಎಸೆತಗಳಲ್ಲಿ ವಿಕೆಟ್ ಗ್ ಕಾಯ್ದುಕೊಳ್ಳುವಲ್ಲಿ 1 ಯಶಸ್ವಿಯಾದ ನಂತರ ಸ್ಕಾಟ್ ಬೊಲಾಂಡ್ ಎಸೆದ ಮುಂದಿನ ಓವರಿನ ಮೂರನೇ ಎಸೆತವನ್ನು ಮಿಡ್-ಆನ್‌ನಲ್ಲಿದ್ದ ಟ್ರಾವಿಸ್ ಹೆಡ್ ತಲೆಯ ಮೇಲಿಂದ ಬೌಂಡರಿಗೆ ಬಾರಿಸಿದ ನಿತೀಶ್ ಹಾಕಿದರು.

ಇದನ್ನೂ ಓದಿ: ಜೀವನದಲ್ಲಿ ಪ್ರತಿ ದಿನವೂ ಪ್ರತಿ ಕ್ಷಣವೂ ಹೊಸದೇ…

18 ಎಸೆತಗಳ ಆತಂಕದ ಕ್ಷಣಗಳನ್ನು ದಾಟಿ ಕೊನೆಗೂ ಗುರಿ ಸಾಧಿಸಿದ ನಿತೀಶ್ ಮಂಡಿಯೂರಿ ಕುಳಿತ ಬ್ಯಾಟಿನ ಹ್ಯಾಂಡಲ್ ಮೇಲೆ ಹೆಲೈಟ್ ಇರಿಸಿ ‘ಬಾಹುಬಲಿ’ಯ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಇದಕ್ಕೂ ಮುನ್ನ ಅರ್ಧಶತಕದ ವೇಳೆಯೂ ಪುಷ್ಪ ಸ್ಟೈಲ್ ಅನ್ನು ಅನಕರಿಸಿದ್ದರು. ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿದ್ದ ತಂದೆಯೂ ದೇವರಿಗೆ ಸಹಸ್ರ ನಮನ ಸಲ್ಲಿಸಿ ಮಗನ ‘ಶತಕದ ವೈಭವ’ವನ್ನು ಕಣ್ಣುಂಬಿಕೊಂಡರು.
ಶುಕ್ರವಾರದ ದಿನದಂತ್ಯಕ್ಕೆ 5 ವಿಕೆಟ್ `ನಷ್ಟಕ್ಕೆ 164 ರನ್ ಗಳಿಸಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಫಾಲೋ- ಆನ್ ತಪ್ಪಿಸಿಕೊಳ್ಳಲು ಇನ್ನೂ 116 ರನ್ ಗಳಿಸಬೇಕಿದ್ದ ಪ್ರವಾಸಿ ತಂಡ ಮೂರನೇ ದಿನದಾಟ ಮುಂದುವರಿಸಿ ಭೋಜನ ವಿರಾಮದ ಹೊತ್ತಿಗೆ ಮತ್ತೆ 80 ರನ್‌ಗಳನ್ನು ಕೂಡಿ ಹಾಕಿತಾದರೂ ಎರಡು ಮಹತ್ವದ ವಿಕೆಟ್‌ಗಳನ್ನು ಕಳೆದುಕೊಂಡಿತು.
ಎಂದಿನ ಸ್ಪೋಟಕ ಶೈಲಿ ಯಲ್ಲೇ ಆಡಿದ ರಿಷಭ್ ಪಂತ್ 28 ರನ್‌ಗಳಿಸಿ ಅನಗತ್ಯ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಚೆಲ್ಲಿದರು.
‌. ಆರನೇ ವಿಕೆಟ್‌ಗೆ ರವೀಂದ್ರ ಜಡೇಜಾ ಅವರೊಂದಿಗೆ 67 ಎಸೆತಗಳಲ್ಲಿ 32 ರನ್ ಕೂಡಿಸಿದ ರಿಷಭ್, ತಂಡದ ಮೊತ್ತ 191 ಆಗಿದ್ದಾಗ ಬೊಲಾಂಡ್ ಬೌಲಿಂಗಿನಲ್ಲಿ ‘ಲ್ಯಾಪ್ ಶಾಟ್‌’ ಪ್ರಯತ್ನಿಸಿ ಕೈ ಸುಟ್ಟಿಕೊಂಡರು. ಭೋಜನ ವಿರಾಮಕ್ಕೆ ಮುನ್ನ ತಮ್ಮ ನಾಲ್ಕನೇ ಅರ್ಧ ಶತಕ ಪೂರೈಸಿದ ಜಡೇಜಾ 71 ರನ್‌ಗಳಿಸಿ ಔಟಾಗಿದ್ದು ಮತ್ತೆ ಆಸ್ಟ್ರೇಲಿಯನ್ನರ ಕೈ ಮೇಲಾಗಿಸಿತು.

ಶತಕದ ಜೊತೆಯಾಟ
ಭೋಜನ ವಿರಾಮದ ನಂತರ ಆಟ ಮುಂದುವರಿಸಿದ ನಿತೀಶ್ ಕುಮಾರ ರೆಡ್ಡಿ-ವಾಷಿಂಗ್ಟನ್ ಸುಂದರ್ ಜೋಡಿ ಆತ್ಮ ವಿಶ್ವಾಸದ ಆಟ ಪ್ರದರ್ಶಿಸಿದರು. ಈ ಜೋಡಿ ಬೇರ್ಪಡಿಸಲು ಎದುರಾಳಿ ನಾಯಕ ಕಮಿನ್ಸ್ ಮಾಡಿದ ಸರ್ವ ಪ್ರಯತ್ನಗಳೂ ವಿಫಲವಾದವು. ಸುಂದರ್ ಸ್ಲಿಪ್‌ನಲ್ಲಿ ಸ್ಟೀವ್ ಸ್ಮಿತ್‌ರಿಂದ ಜೀವದಾನವೊಂದನ್ನು ಪಡೆದಿದ್ದನ್ನು ಬಿಟ್ಟರೆ, ಭಾರತದ ಈ ಜೋಡಿ ಆಸೀಸ್ ಬೌಲರ್‌ಗಳಿಗೆ ಯಾವ ಅವಕಾಶವನ್ನೂ ನೀಡಲಿಲ್ಲ.
ಎಂಟನೇ ವಿಕೆಟ್‌ಗೆ ಈ ಜೋಡಿ 285 ಎಸೆತಗಳಲ್ಲಿ 127 ರನ್ ಪೇರಿಸಿ ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ, ವಾಷಿಂಗ್ಟನ್ ಸುಂದರ್ ಅರ್ಧಶತಕ ಗಳಿಸಿ, ನೇಥನ್ ಲಿಯೋನ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಸ್ಟೀವ್ ಸ್ಮಿತ್‌ಗೆ ಕ್ಯಾಚ್ ನೀಡಿದರು. ಇದಾದ 2 ರನ್‌ಗಳ ಅಂತರದಲ್ಲಿ ಬುಮ್ರಾ ಸಹ ವಿಕೆಟ್ ಚೆಲ್ಲಿದರು. ಸದ್ಯ 4ನೇ ದಿನ ಭಾರತ ಆಲೌಟ್ ಆಗುವ ಸಾಧ್ಯತೆ ಹೆಚ್ಚಿದ್ದು,ಆಸೀಸ್ ಮುನ್ನಡೆ ಸಾಧಿಸಬಹುದು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಮೊ. ಇನ್ನಿಂಗ್ಸ್ 122.4 ಓವರ್‌ಗಳಲ್ಲಿ 474 ರನ್, ಭಾರತ 116 ಓವರ್‌ಗಳಲ್ಲಿ 9 ವಿಕೆಟ್‌ ಗೆ 358 ರನ್ನ.

Leave a Comment